ಕಾರಟಗಿ: ಶಾಸಕ ಜನಾರ್ದನ ರೆಡ್ಡಿಗೆ ಬಹುದೊಡ್ಡ ಅಧಿಕಾರವನ್ನು ಬಿಜೆಪಿಯವರು ನೀಡಿದ್ದಾರೆಂಬಂತೆ ಮಾತನಾಡುತ್ತಿದ್ದಾರೆ. ಇವರಿಗೆ ಮಾತನಾಡಲು ಬಿಜೆಪಿಯ ಯಾರು ಅಧಿಕಾರ ಕೊಟ್ಟಿದ್ದಾರೆ. ಬರೀ ಮಾತನಾಡಿಯೇ ಲೀಡರ್ ಆಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ರೆಡ್ಡಿ ಬಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯ ನಿಮಿತ್ತ ಮಂಗಳವಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಗಾಳಿ ಗಂಧವೇ ರೆಡ್ಡಿಗೆ ಗೊತ್ತಿಲ್ಲ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಏನಾಯಿತು ಎಂಬುದರ ಬಗ್ಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಈಗ ಬಿಜೆಪಿಯವರು ಯಾವ ಅಧಿಕಾರವನ್ನೂ ರೆಡ್ಡಿಗೆ ನೀಡಿಲ್ಲ. ಹಿಂದೆ ನಮ್ಮನ್ನು ಮುಂದಿಟ್ಟುಕೊಂಡು ಮಂತ್ರಿಯಾಗಿದ್ದರು. ಬಿಜೆಪಿಯವರಿಗೂ ಹಿಂದೆ ರೆಡ್ಡಿ ತೊಂದರೆ ಕೊಟ್ಟಿದ್ದಲ್ಲದೇ, ಆತ್ಮೀಯ ಶ್ರೀರಾಮುಲುರನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಅವರನ್ನೇ ಪರಾಭವಗೊಳಿಸಿದರು ಎಂದವರು ಆರೋಪಿಸಿದರು.
ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ ಸಣ್ಣತನ ತೋರಿಲ್ಲ, ಅದರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ವೈಯಕ್ತಿಕ ವಿಚಾರದ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ತಪ್ಪು ಮಾಡಿದವರು ಶೀಕ್ಷೆ ಅನುಭವಿಸುವರು. ಡಿ. ಕೆ. ಶಿವಕುಮಾರ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುವಲ್ಲಿ ಮಗ್ನರಾಗಿದ್ದಾರೆ ಎಂದವರು ಹೇಳಿದರು.