ಗಂಗಾವತಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿ ಯಿಂದ ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 5681 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಅದಾಲತ್ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ 6,982 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ನಾಲ್ವರು ನ್ಯಾಯಾಧೀಶರು ಹಾಗೂ 300 ಸಮಾಲೋಚನಾ ವಕೀಲರು ಅದಾಲತ್ ನಡೆಸಿಕೊಟ್ಟರು. ಕೆಲ ಅರ್ಜಿದಾರರು ವಕೀಲರ ಜತೆ ಅದಾಲತ್ನಲ್ಲಿ ಭಾಗವಹಿಸಿದ್ದರು. ನಗರದ ತಾಲ್ಲೂಕು ನ್ಯಾಯಾಲಯದಲ್ಲಿ ಅರ್ಜಿದಾರರ ಜಂಗುಳಿ ಇತ್ತು..
598 ಚೆಕ್ ಬೌನ್ಸ್ ಪ್ರಕರಣಗಳ ಪೈಕಿ, 64 ಇತ್ಯರ್ಥ, 588 ರಸ್ತೆ ಅಪಘಾತಗಳ ಪೈಕಿ, 45 ಇತ್ಯರ್ಥ,150 ಕೌಟುಂಬಿಕ ವ್ಯಾಜ್ಯಗಳ ಪೈಕಿ 1 ಮತ್ತು 957 ಕ್ರಿಮಿನಲ್, 93 ಜನನ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ಇತ್ಯರ್ಥಪಡಿ ಸಲಾಗಿದೆ. ಇದರಿಂದ ಸರ್ಕಾರಕ್ಕೆ ₹2,75,13,667 ಮೊತ್ತ ಜಮ ಮಾಡಲಾಗಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಜೆ ಶಿವಳ್ಳಿ,ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ರಮೇಶ್ ಎಸ್.ಗಾಣಿಗೇರಾ, ಪ್ರಧಾನ ಸಿವಿಲ್ ನ್ಯಾಯಾಧೀಶೇ ಶ್ರೀದೇವಿ ದರ್ಬಾರೇ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ವಿಶ್ವನಾಥ, ಎಸ್ಬಿಐ, ಬಿಎಸ್ಎನ್ಎಲ್ ಸಿಬ್ಬಂದಿ ಇದ್ದರು.