ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಬಿಜೆಪಿಯಿಂದ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಲಭಿಸಿಲ್ಲ. ಅವರ ಬದಲು ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ಬಸವರಾಜ ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು ಕಡಿಮೆಯಾದರೂ ಹೈಕಮಾಂಡ್ ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೇ ಬಸವರಾಜ ಅವರ ಹೆಸರು ಕೇಳಿಬಂದಿತ್ತು.
ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಜೆಡಿಎಸ್ನಿಂದ ಗೆದ್ದು ಶಾಸಕರಾಗಿದ್ದ ಕೆ. ಶರಣಪ್ಪ ಅವರ ಪುತ್ರ ಬಸವರಾಜ ಅವರಿಗೆ ನೇರವಾಗಿ ರಾಜಕೀಯ ನಂಟು ಇದ್ದಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಮಾತ್ರ. ಶರಣಪ್ಪ ಒಂದು ಸಲ ಶಾಸಕರಾಗಿ ಬಳಿಕ ಮೂರು ಬಾರಿ ಸ್ಪರ್ಧಿಸಿ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಹಿಂದಿನ ಲೋಕಸಭಾ ಚುನಾವಣೆ ವೇಳೆ ಶರಣಪ್ಪ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಆಗ ಬಸವರಾಜ ಕೂಡ ಅಪ್ಪನ ಹಾದಿಯಲ್ಲಿ ಸಾಗಿದ್ದರು.