ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಮುಂಗಾರು ಹಬ್ಬ: ಭರವಸೆಯ ನಿರೀಕ್ಷೆಯಲ್ಲಿ ರೈತ

Published 20 ಮೇ 2024, 5:04 IST
Last Updated 20 ಮೇ 2024, 5:04 IST
ಅಕ್ಷರ ಗಾತ್ರ

ಕುಷ್ಟಗಿ: ಒಣ ಮತ್ತು ಹಸಿ ಬರಕ್ಕೆ ಮತ್ತೊಂದು ಹೆಸರೇ ಕೊಪ್ಪಳ ಜಿಲ್ಲೆ. ಮಳೆ ಬೆಳೆ ವಿಚಾರದಲ್ಲಿ ಅಷ್ಟೊಂದು ಅವಿನಾಭಾವ ಸಂಬಂಧ. ಹಸಿಬರವಾದರೆ ಒಂದಷ್ಟು ಅಂತರ್ಜಲ ಹೆಚ್ಚಬಹುದು, ದನಕರುಗಳಿಗೆ ಮೇವೂ ದೊರೆಯಬಹುದು. ಆದ್ರ ಒಣ ಬರದ ಸಂಕಷ್ಟ ಮಾತ್ರ ಯಾರಿಗೂ ಬೇಡ ನೋಡ್ರಿ. ಹೌದು ಕಳೆದ ವರ್ಷ ವರುಣನ ಅವಕೃಪೆಯಿಂದೊದಗಿದ ಒಣ ಬರವನ್ನು ನೆನಪಿಸಿಕೊಂಡ ರೈತರಲ್ಲಿ ಈ ಆತಂಕದ ಮಾತುಗಳು ಬರುವುದು ಸಹಜ.

ಹಿಂದಿನ ವರ್ಷದ ಮುಂಗಾರು ಹಾಗೂ ಹಿಂಗಾರು ಕಳೆದು ಅನೇಕ ತಿಂಗಳುಗಳ ನಂತರ ತಡವಾಗಿಯಾದರೂ ಮಳೆಯ ಲಕ್ಷಣಗಳು ಗೋಚರಿಸುತ್ತಿವೆ. ಲೋಕಸಭಾ ಚುನಾವಣೆ, ಮತದಾನ ಹಬ್ಬ ಮುಗಿದಿದ್ದು ಫಲಿತಾಂಶಕ್ಕೆ ತಲೆಕೆಡಿಸಿಕೊಳ್ಳದ ರೈತರು ಈಗ ಮುಂಗಾರಿನ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹೆಚ್ಚುಕಡಿಮೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕೃತಿಕಾ ಮಳೆಯ ಶುಭಾಗಮನವಾಗಿದ್ದು ಈ ಬಾರಿ ಉತ್ತಮ ಮಳೆ ಬೆಳೆ ಬರಬಹುದೆಂಬ ಭರವಸೆಯ ನಿರೀಕ್ಷೆ ಹೊತ್ತ ರೈತರು ಹೊಲಗದ್ದೆಗಳತ್ತ ಮುಖ ಮಾಡಿದ್ದಾರೆ.

ಇದೇ ರೀತಿ ವರುಣ ಕೃಪೆ ತೋರುತ್ತ ಮುಂದುವರಿದರೆ ಕೃಷಿ ಚಟುವಟಿಕೆಗಳು ಗರಿಗೆದರುವ ಲಕ್ಷಣಗಳಿವೆ. ಮುಂಗಾರು ಆಗಮನದ ಸುಳಿವು ದೊರೆಯುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸದ ಗೆರೆಗಳು ಗೋಚರಿಸುತ್ತಿವೆ.

ಮಳೆ ಭರವಸೆಯ ನಡುವೆಯೂ ಮಳೆಗಾಲದ ಬಗ್ಗೆ ರೈತರಲ್ಲಿ ಬಹಳಷ್ಟು ಅನುಮಾನಗಳೂ ಇವೆ. ಕಳೆದ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿ ದಾಖಲೆ ಪ್ರಮಾಣದಲ್ಲಿ ಬಿತ್ತನೆಯೂ ಆಗಿತ್ತು. ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು, ಶೇಂಗಾ ಮೊದಲಾದ ಬೆಳೆಗಳ ಬೀಜಗಳನ್ನು ಹೊಲದೊಡಲಿಗೆ ಹಾಕಿದ್ದೂ ಆಯಿತು. ಆದರೆ ಬೆಳೆಗಳು ಸಮೃದ್ಧವಾಗಿ ಬೆಳೆಗೆ ಹೊಂದುವಷ್ಟರಲ್ಲಿ ಮಳೆ ಸುಳಿವಿಲ್ಲದಂತಾಗಿ ಬೆಳೆದು ನಿಂತ ಬೆಳೆಗಳೆಲ್ಲ ಒಣಗಿ ಕರಕಲಾದವು. ಅಷ್ಟೇ ಅಲ್ಲ ಒಣ ಬರಕ್ಕೆ ತುತ್ತಾಗಿ ಜಾನುವಾರುಗಳಿಗೆ ಹೊಟ್ಟು ಮೇವು ಸಹ ಅಲಭ್ಯವಾಗಿ ಬಹುತೇಕ ರೈತರು ಎತ್ತು, ಹಸುಗಳನ್ನು ಕಸಾಯಿಖಾನೆಯವರಿಗೆ ಒಪ್ಪಿಸಿ ಉದ್ಯೋಗಕ್ಕಾಗಿ ಅಲೆಯುತ್ತ ಗುಳೆ ಹೋಗಿದ್ದು ಬರದ ಭೀಕರತೆಯನ್ನು ಸಾರಿದ ಚಿತ್ರಣ ಇನ್ನೂ ಕಣ್ಮುಂದಿದೆ. ಆದರೆ, ಈ ಬಾರಿ ಭೂತಾಯಿ ಹಾಗೆ ಮಾಡಲಿಕ್ಕಿಲ್ಲ ಎಂದೇ ರೈತರು ವಸುಂಧರೆಯ ಮೇಲೆ ನಂಬಿಕೆ ಇರಿಸಿ ಕೂರಿಗೆಯ ಮೇಲಿನ ದೂಳುಕೊಡವಿ ಬಿತ್ತನೆಗೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.

ನೆರೆಬೆಂಚಿಯ ರೈತ ಚಂದಪ್ಪ ಗುರಿಕಾರ ಮೊದಲ ಮಳೆಗೇ ಸಜ್ಜೆ ಬಿತ್ತನೆಯಲ್ಲಿ ತೊಡಗಿ ಭವಿಷ್ಯದೆಡೆಗೆ ಗುರಿ ಇಟ್ಟಿದ್ದು ಕಂಡುಬಂದಿತು. ಹಿಂದಿನ ಈ ವರ್ಷದ ಮಳೆ ಬೆಳೆ ಕುರಿತು ಅವರನ್ನು ಮಾತಿಗೆಳೆದಾಗ ‘ನಮ್ಮ ಕೈಯಾಗ ಏನೈತ್ರಿ? ಎಲ್ಲಾ ಮಳಿಯಪ್ಪಂದು, ಮಳಿಯಾದ್ರ ಚೊಲೊ, ಇಲ್ಲಾಂದ್ರ ಏನ್ ಮಾಡೂದೈತ್ರಿ? ದನ ಕರ ಕೊಟ್ಟು ಕೆಲಸ ಸಿಕ್ಕಲ್ಲೆ ದುಡ್ಯೇಕ ದೇಶಾವರಿ ಮ್ಯಾಲೆ ಹೋಗೊದು ನಮ್ಮ ಹಣೆಬರದಾಗ ಐತೇಐತಿ ಹೌದಲ್ರಿ’ ಎಂದೇ ವಿಷಾದ ಹೊರಹಾಕಿದರು. ಚಳಗೇರಿಯ ವೀರಭದ್ರಪ್ಪ, ತೋಪಲಕಟ್ಟಿಯ ಹನುಮಗೌಡ ಹೀಗೇ ಬಹುತೇಕ ರೈತರಲ್ಲಿ ಇಂಥದ್ದೇ ಮಾತುಗಳು ಬಂದವು. ಆದರೆ ಅವರಿಂದ ಮರುಕ್ಷಣದಲ್ಲೇ ‘ಈ ಬ್ಯಾರೆ ಮಳಿ ಬೆಳಿ ಚೊಲೊ ಅದಾವಂತ ಎಲ್ಲಾ ಕಡೆನೂ ಕಾರಣೀಕದಾಗ ಹೇಳ್ಯಾರ ನೋಡ್ರಿ’ ಎಂಬ ಆಶಾಭಾವನೆ ಅವರಲ್ಲಿನ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿತು.

ಪೂರ್ವ ಸಿದ್ಧತೆ: ಈ ಮಧ್ಯೆ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಹೊಲಗದ್ದೆಗಳನ್ನು ಹದಗೊಳಿಸುತ್ತಿರುವ ದೃಶ್ಯ ವಿವಿಧ ಕಡೆ ಭೇಟಿ ನೀಡಿದಾಗ ಕಂಡುಬಂದಿತು. ಮಳೆಯಾಗುತ್ತಿದ್ದಂತೆ ಟ್ರ್ಯಾಕ್ಟರ್‌ಗಳ ಭರಾಟೆ ಜೋರಾಗಿದೆ. ಅವುಗಳಿಗೀಗ ಬಿಡುವಿಲ್ಲದ ಕೆಲಸ. ಮಡಿಕೆ, ಕುಂಟಿ ಹೊಡೆದು ಬಿತ್ತನೆಗೆ ಸಜ್ಜುಗೊಳಿಸುವ ಚಿತ್ರಣ ಕಾಣುತ್ತಿದೆ. ಮಳೆಯಾಗಿ ಭೂಮಿಯಲ್ಲಿ ತೇವಾಂಶ ಉಳಿದರೆ ಬಿತ್ತನೆ ಚಟುವಟಿಕೆಗೆ ಚಾಲನೆ ದೊರೆಯಲಿದೆ.ಮಳೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಪ್ರತಿ ವರ್ಷ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಮುಂದೆ ಒಳ್ಳೆಯದಾಗಬಹುದೆಂಬ ಆಶಾಭಾವದೊಂದಿಗೆ ಮುನ್ನಡೆಯಬೇಕಿದೆ. ಶರಣಪ್ಪ ಹೊಸೂರು ರೈತ

ಕುಷ್ಟಗಿ ಸಮೀಪದ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಬಿತ್ತನೆಗೂ ಮೊದಲು ರೈತರು ಬಿತ್ತುವ ಕೂರಿಗೆಗೆ ಪೂಜೆ ನೆರವೇರಿಸಿದರು
ಕುಷ್ಟಗಿ ಸಮೀಪದ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಬಿತ್ತನೆಗೂ ಮೊದಲು ರೈತರು ಬಿತ್ತುವ ಕೂರಿಗೆಗೆ ಪೂಜೆ ನೆರವೇರಿಸಿದರು
ಕೊಪ್ಪಳದ ಜವಾಹರ್‌ ರಸ್ತೆಯ ಸಿಕ್ಕಲಗಾರರ ಅಂಗಡಿಯಲ್ಲಿ ಕೃಷಿ ಪರಿಕರಗಳ ಖರೀದಿಯಲ್ಲಿ ರೈತರು ತೊಡಗಿದ್ದು ಕಂಡುಬಂತು
ಕೊಪ್ಪಳದ ಜವಾಹರ್‌ ರಸ್ತೆಯ ಸಿಕ್ಕಲಗಾರರ ಅಂಗಡಿಯಲ್ಲಿ ಕೃಷಿ ಪರಿಕರಗಳ ಖರೀದಿಯಲ್ಲಿ ರೈತರು ತೊಡಗಿದ್ದು ಕಂಡುಬಂತು
ಮಳಿ ಆದಾಗ ಹದ ನೋಡಿ ಬಿತ್ತೀದ್ರ ಒಂದಷ್ಟು ಬೆಳಿ ಕೈಗೆ ಹತ್ತಬಹುದು. ಎಲ್ಲಾ ಶಿವನ ಇಚ್ಛೆ ನೋಡ್ರಿ. ಮಳೆ ಆಗ್ತಾ ಇರೋದಂತೂ ಖುಷಿ ನೀಡ್ಯಾದ್ರಿ.
ಚಂದಪ್ಪ ಗುರಿಕಾರ ರೈತ
ಮಳೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಪ್ರತಿ ವರ್ಷ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಮುಂದೆ ಒಳ್ಳೆಯದಾಗಬಹುದೆಂಬ ಆಶಾಭಾವದೊಂದಿಗೆ ಮುನ್ನಡೆಯಬೇಕಿದೆ.
ಶರಣಪ್ಪ ಹೊಸೂರು ರೈತ
ಜಿಲ್ಲೆಯಲ್ಲಿ ಮೇಲಿಂದ ಮೇಲೆ ಉತ್ತಮವಾಗಿ ಮಳೆಯಾಗುತ್ತಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಂಗ್ರಹವೂ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ರೈತರು ಬಿತ್ತನೆ ಮಾಡಬೇಕು. ಅವರಿಗೆ ಯಾವುದೇ ಕೊರತೆಯಾಗುವುದಿಲ್ಲ.
ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ
ಕೊರಳ ‘ಗೆಜ್ಜೆನಾದ’ದ ಮೌನ
ಇತ್ತೀಚಿನ ವರ್ಷಗಳಲ್ಲಿ ಎತ್ತುಗಳ ಸಂಖ್ಯೆ ಯಾರೂ ನಿರೀಕ್ಷಿಸದಷ್ಟು ವೇಗದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ. ಕೆಲ ಹಳ್ಳಿಗಳಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಎಷ್ಟೇ ಕಷ್ಟವಾದರೂ ಎತ್ತುಗಳನ್ನು ಉಳಿಸಿಕೊಂಡಿದ್ದಾರೆ. ಬಿತ್ತನೆಗೂ ಟ್ರ್ಯಾಕ್ಟರ್‌ಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಎತ್ತುಗಳ ಕೊರಳ ಗೆಜ್ಜೆನಾದ ಕೇಳದಂತಾಗಿದೆ. ಹಾಗಾಗಿ ಬಡಿಗ ಕಮ್ಮಾರರಿಗೆ ಕೂರಿಗೆ ಕೆತ್ತುವ ಕೆಲಸವೂ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಯಂತ್ರ ಮತ್ತು ಎತ್ತುಗಳಿಂದ ಬಿತ್ತನೆಗೆ ಸಂಬಂಧಿಸಿದ ವ್ಯತ್ಯಾಸ ಕುರಿತು ಹಿರಿಯ ರೈತ ಶರಣಪ್ಪ ಹೊಸೂರು ತನ್ನ ಎತ್ತುಗಳ ಮೈ ಸವರುತ್ತ ಹೇಳಿದ್ದು ಹೀಗೆ ‘ನೀವೇನ ಅನ್ರಿ ಎತ್ತಿಲೆ ಬಿತ್ತಿದ್ದ ಬ್ಯಾರೆ ಬಸವ ಹೆಜ್ಜಿ ಇಟ್ರ ಭೂತಾಯಿ ನಡಗತಾಳ ಅಷ್ಟೊಂದು ಶಕ್ತಿ ಐತಿ ಎತ್ತಿನ ಕೂರಿಗೆಯಿಂದ ಬಿತ್ತಿದ ಬೆಳಿ ಸಾಲ ನೋಡ್ರಿ ಹ್ಯಾಂಗಿರತೈತಿ’ ಹೀಗೆ ಆತ ಎತ್ತುಗಳ ಅಗತ್ಯತೆ ಇದೆ ಎಂದು ಅವುಗಳ ಮಹತ್ವವನ್ನು ಹಂಚಿಕೊಂಡರು.
ರಸಗೊಬ್ಬರ ಖರೀದಿಗೆ ಧಾವಂತ
ಮಳೆ ಆರಂಭಗೊಳ್ಳುತ್ತಿದ್ದಂತೆ ಮೈಕೊಡವಿರುವ ಕೃಷಿಕರಲ್ಲಿ ಮುಂದೆ ಸಿಗುತ್ತದೆಯೊ ಅಭಾವ ಆಗುತ್ತದೆಯೊ ಎಂದೆ ಈಗಲೇ ರಸಗೊಬ್ಬರ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವಲ್ಲಿ ಧಾವಂತ ಕಂಡುಬರುತ್ತಿದ್ದು ವಾಹನಗಳಲ್ಲಿ ಡಿಎಪಿ ಯೂರಿಯಾ ಗೊಬ್ಬರ ಚೀಲಗಳ ಮೂಟೆಗಳನ್ನು ಹೇರಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಕೆಲ ವರ್ಷಗಳ ಹಿಂದೆ ಡಿಎಪಿಗಾಗಿ ರೈತರು ಪರದಾಡಿ ರಗಳೆ ಮಾಡಿಕೊಂಡ ಉದಾಹರಣೆಗಳೂ ಇವೆ. ಕಾಳಸಂತೆ ಕೃತಕ ಅಭಾವ ಸೃಷ್ಟಿಸುವುದನ್ನು ನಿಯಂತ್ರಿಸಲೆಂದೆ ಗೊಬ್ಬರ ವಿತರಣೆಗೂ ಸರ್ಕಾರ ನಿಯಮಗಳನ್ನು ವಿಧಿಸಿತ್ತು. ಆಧಾರ್ ಗುರುತಿನ ಚೀಟಿ ತಂದವರಿಗೆ ಮಾತ್ರ ವಿತರಕರು ಗೊಬ್ಬರ ನೀಡುತ್ತಿದ್ದರು. ಆದರೆ ಸದ್ಯ ಗುರುತಿನ ಚೀಟಿ ಇಲ್ಲದೆಯೇ ಗೊಬ್ಬರ ದೊರೆಯುತ್ತಿದೆ ಎಂಬ ಸಮಾಧಾನ ರೈತರಿಂದ ಕೇಳಿಬಂದಿತು.
ಬೀಜ ಖರೀದಿಸಲು ದುಂಬಾಲು
ಬೆಳೆಯಲ್ಲಿ ವೈವಿಧ್ಯತೆ ಇರಲಿ ಪದೇಪದೆ ಒಂದೇ ಬೆಳೆ ಬೆಳೆಯುವುದು ಬೇಡ ಎಂಬ ಕೃಷಿ ಇಲಾಖೆ ಸೂಚನೆಯ ನಡುವೆಯೂ ಮೆಕ್ಕೆಜೋಳ ಬೀಜಕ್ಕೆ ರೈತರಿಂದ ಮತ್ತೆ ಹೆಚ್ಚಿನ ಬೇಡಿಕೆ ಬಂದಿದೆ. ಈವರೆಗೂ ಸುಪ್ತಾವಸ್ಥೆಯಲ್ಲಿದ್ದ ಬಿತ್ತನೆಬೀಜದ ಖಾಸಗಿ ಕಂಪನಿಗಳ ಪ್ರತಿನಿಧಿಗಳು ತಮ್ಮ ಬೀಜ ಖರೀದಿಸುವಂತೆ ರೈತರಿಗೆ ದುಂಬಾಲು ಬೀಳುತ್ತಿರುವುದು ಕಂಡುಬಂದಿದೆ. ಕೃಷಿ ಇಲಾಖೆ ಖಾಸಗಿಯವರಿಂದ ಎಲ್‌ ಒನ್‌ ದರದಲ್ಲಿ ಖರೀದಿಸುವ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು ಬೀಜ ಸರಬರಾಜು ಮಾಡುವುದಕ್ಕೆ ಕೃಷಿ ಇಲಾಖೆಯೊಂದಿಗೆ ಖಾಸಗಿ ಕಂಪನಿಗಳು ವಿವಿಧ ರೀತಿಯಲ್ಲಿ ಪೈಪೋಟಿಗಿಳಿದಿವೆ ಎನ್ನಲಾಗಿದೆ.
ನಿರಂತರ ಮಳೆ; ಅನ್ನದಾತನಲ್ಲಿ ಆಶಾವಾದ
ಕೊಪ್ಪಳ: ಬರಗಾಲದ ಬೇಗೆಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಪೂರ್ವ ಮುಂಗಾರಿನಲ್ಲಿ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಅನ್ನದಾತರಲ್ಲಿ ಆಶಾಭಾವನೆ ಮೂಡಿಸಿದೆ. ಬಿರುಬಿಸಿಲು ಬಿಸಿಗಾಳಿ ಮತ್ತು ಅರೆಝಳಕ್ಕೆ ಬೇಸಿಗೆ ಅವಧಿಯಲ್ಲಿ ರೋಸಿ ಹೋಗಿದ್ದ ಜನರಿಗೆ ಈಗ ಬೀಳುತ್ತಿರುವ ಮಳೆ ಖುಷಿ ನೀಡಿದೆ. ರೈತರ ಹಣೆಯ ಮೇಲಿನ ಚಿಂತೆಯ ಗೆರೆಗಳನ್ನು ದೂರ ಮಾಡುತ್ತಿವೆ. ಬರಿದಾಗಿ ಹೋಗಿದ್ದ ಕೆರೆ ಕಟ್ಟೆಗಳು ನಿಧಾನವಾಗಿ ನೀರು ತುಂಬಿಕೊಳ್ಳುತ್ತಿವೆ. ಮುಖ್ಯವಾಗಿ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿತ್ತು. ಬಿಸಿಲಿನ ಬೇಗೆ ಮುಗಿದು ಮಳೆಯಾಗುತ್ತಿದ್ದಂತೆಯೇ ಜನರಲ್ಲಿ ಸಂಭ್ರಮ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT