ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿ ಘಟಕಗಳಿಗಿಲ್ಲ ಜಾಗ!

ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಸ ನಿರ್ವಹಣೆ ಸಮಸ್ಯೆ
Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕೊಪ್ಪಳ: ನಗರ, ಪಟ್ಟಣ ಹಾಗೂ ಗ್ರಾಮಗಳ ತಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮರುಬಳಕೆ ಮಾಡುವ ಯೋಜನೆಗೆ ಗ್ರಹಣ ಬಡಿದಿದೆ.

ನಗರ ನೈರ್ಮಲ್ಯ, ಕೊಳಚೆ ನಿರ್ಮೂಲನೆ ಮಂಡಳಿ, ಪರಿಸರ ಮಂಡಳಿ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಕಸ ವಿಲೇವಾರಿಗೆ ಯೋಜನೆಗಳು ಇದ್ದರೂ ಅನುಷ್ಠಾನಗೊಂಡಿಲ್ಲ. ಈಗಲೂ ಜಿಲ್ಲೆಯಾದ್ಯಂತ ಗ್ರಾಮ ಪ್ರವೇಶಿಸುತ್ತಿದ್ದಂತೆ ತಿಪ್ಪೆ ಗುಂಡಿಗಳು, ಬಯಲು ಶೌಚ, ಅಸ್ವಚ್ಛತೆಯೇ ಕಂಡು ಬರುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 147 ಪಂಚಾಯಿತಿಗಳಿವೆ. 58 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪ್ರಯತ್ನ ನಡೆದಿದೆ.ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾದರಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ, ನಿರ್ಮಾಣ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ.

2013ರಲ್ಲಿಯೇ 38 ಗ್ರಾಮ ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

6 ವರ್ಷಗಳಲ್ಲಿ 9 ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, ಇನ್ನೂ 9 ಪ್ರಗತಿಯಲ್ಲಿವೆ. ಪ್ರಸ್ತುತ 20 ಘಟಕ ಆರಂಭಕ್ಕೆ ಅನುಮೋದನೆ ದೊರೆತಿದೆ.

ವಿಳಂಬ ಏಕೆ: ಕೆಲ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹಣ ಘಟಕ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ. ಇದಕ್ಕೆ ಜಮೀನು ಕೊರತೆಯೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೆ, ವೈಜ್ಞಾನಿಕ ಕಸಸಂಗ್ರಹಣೆ, ವಿಂಗಡಣೆ, ಸಂಸ್ಕರಣೆ, ಜಾಗೃತಿ ಕೊರತೆಯೂ ಘಟಕ ಕಾರ್ಯಾರಂಭಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಹೊಸಳ್ಳಿ ಮಾದರಿ: ತಾಲ್ಲೂಕಿನ ಮುನಿರಾಬಾದ್ ಸಮೀಪ ಹೊಸಳ್ಳಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಸುತ್ತಮುತ್ತಲಿನ ಪಂಚಾಯಿತಿಗಳಿಂದ ಕಸ ಖರೀದಿಸಿ ಅನೇಕ ಉತ್ಪನ್ನಗಳನ್ನು ತಯಾರಿಸಿ ಹೆಸರುವಾಸಿಯಾಗಿದೆ. ಈ ಘಟಕದಲ್ಲಿ ಗೊಬ್ಬರ, ಪ್ಲ್ಯಾಸ್ಟಿಕ್ ಬ್ಯಾಗ್, ಇಟ್ಟಂಗಿ, ರಸ್ತೆಗೆ ಹಾಕುವ ಹರಳು ಮಿಶ್ರಿತ ಮಣ್ಣು ಸೇರಿದಂತೆ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಿ ಅನೇಕರಿಗೆ ಉದ್ಯೋಗ ನೀಡಿ ಪ್ರಶಸ್ತಿ ಪಡೆದ ಹೆಗ್ಗಳಿಕೆಯೂ
ಇದಕ್ಕಿದೆ.

ಇದೇ ಮಾದರಿಯಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಘಟಕ ಸ್ಥಾಪಿಸಿ ಗ್ರಾಮದ ಹಸಿ ಮತ್ತು ಒಣ ಕಸವನ್ನು ಸಂಸ್ಕರಣೆ ಮಾಡುವ ಕಾರ್ಯಕ್ಕೆ ಪಂಚಾಯಿತಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಘಟಕದಲ್ಲಿ ಏನೇನು?: ಪ್ರತಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ₹ 20 ಲಕ್ಷ ವೆಚ್ಚ ಮಾಡಲಾಗುತ್ತಿದೆ. 1 ಆಪೆ ವಾಹನ, 4 ತಳ್ಳುಗಾಡಿಗಳು, ಅವಶ್ಯಕತೆಗೆ ತಕ್ಕಷ್ಟು ಕಸದ ಬುಟ್ಟಿ, ಸಲಕರಣೆ, 1 ಸಂಸ್ಕರಣ ಘಟಕ, ಚಾಲಕ ಮತ್ತು ಕಾರ್ಮಿಕರನ್ನು ಘಟಕ ಒಳಗೊಂಡಿರುತ್ತದೆ. ಕಸದಿಂದ ರಸ ಮಾಡಿ ಬರುವ ಲಾಭದಲ್ಲಿಯೇ ಸಿಬ್ಬಂದಿ ಮತ್ತು ಘಟಕ ನಿರ್ವಹಣೆಯನ್ನು ಪಂಚಾಯಿತಿಗಳು ಮಾಡಬೇಕಿದೆ.

ನಿರ್ಮಲ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘಟಕಕ್ಕೆ ಈ ಹಣ ನೀಡಬೇಕು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹೊಣೆ ಜಿಲ್ಲಾ ಪಂಚಾಯಿತಿ ಸಿಇಗೆ ವಹಿಸಲಾಗಿದೆ. ಸ್ಥಳೀಯ ಬೇಡಿಕೆಗೆ ತಕ್ಕಂತೆ ತ್ಯಾಜ್ಯ ನಿರ್ವಹಿಸಬೇಕು. ಜಿಲ್ಲಾ ನೋಡಲ್ ಅಧಿಕಾರಿ ಘಟಕಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು.

ಜಿಲ್ಲೆಯಲ್ಲಿ ಬಯಲುಶೌಚ ಮುಕ್ತ, ಕಸ ವಿಲೇವಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿಪರಿಣಾಮಕಾರಿ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಬೇಕಾಗಿರುವುದು ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಮೇಲೆ ಇದೆ. ಸ್ವಚ್ಛ, ಸುಂದರ, ಆರೋಗ್ಯವಂತ ಗ್ರಾಮಗಳ ನಿರ್ಮಾಣ ಮಾಡಬೇಕಾದ ಹೊಣೆ ಸ್ಥಳೀಯ ಪಂಚಾಯಿತಿ ಮೇಲೆ ಇದೆ.

ನಗರಸಭೆ ವ್ಯಾಪ್ತಿಯಲ್ಲಿ ಹಿರೇಸಿಂದೋಗಿ ಬಳಿ ತಾಜ್ಯ ಸಂಗ್ರಹಣ ಘಟಕ ಇದೆ. ಕಸವನ್ನು ಸಂಗ್ರಹಿಸಿ ಗುಡ್ಡೆ ಹಾಕುವ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಅದರಂತೆ ಗಂಗಾವತಿಯಲ್ಲಿ ನಗರದ ಎಲ್ಲ ಕಸವನ್ನು ದುರ್ಗಮ್ಮನ ಹಳ್ಳಕ್ಕೆ ಸುರಿಯಲಾಗುತ್ತಿದೆ. ಕುಕನೂರು ಪಟ್ಟಣದ ಕಸವನ್ನು ಸಮೀಪದ ಗ್ರಾಮಗಳ ಬದಿ ಹಾಕುವ ಕೆಲಸ ನಡೆದಿದೆ.

ಕುಷ್ಟಗಿ, ಹನಮಸಾಗರ, ತಾವರಗೇರಾದಲ್ಲಿ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿಯೇ ಮಾದರಿ ಘಟಕ ಇರುವ ಹೊಸಳ್ಳಿ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕದ ಮಾದಿಯನ್ನು ಅನುಸರಿಸುತ್ತಿಲ್ಲ. ಪರಿಣಾಮವಾಗಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಕಸ ವಿಲೇವಾರಿ ಮಾಡಿದರೂ ಅದಕ್ಕೆ ಸೂಕ್ತವಾದ ಜಾಗದ ಕೊರತೆಯೂ ಅನೇಕ ಕಡೆಗಳಲ್ಲಿ ಇದೆ.

ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ತ್ಯಾಜ್ಯ ವಿಲೇವಾರಿಯನ್ನು ಸಮರೋಪಾದಿಯಲ್ಲಿ ಮಾಡಬೇಕಾಗಿದೆ. ಇದಕ್ಕೆ ಸಾಕಷ್ಟು ಪೌರ ಕಾರ್ಮಿಕರ ಕೊರತೆ ಕೂಡಾ ಇದೆ. ಕೆಲವು ಗ್ರಾಮಗಳಲ್ಲಿ ವಾರಕ್ಕೊಮ್ಮೆ ಕಸ ಗೂಡಿಸಿ ಗುಡ್ಡೆ ಹಾಕುವ ಕೆಲಸ ನಡೆದಿದೆ. ಜಿಲ್ಲಾ ಪಂಚಾಯಿತಿ ಸೂಕ್ತ ನಿಗಾವಹಿಸಿ ಉತ್ತಮ ತಾಜ್ಯ ಸಂಗ್ರಹಣಗಾರಗಳು, ಮರುಬಳಕೆ ಕುರಿತು ಯೋಚಿಸಬೇಕಾಗಿದೆ.

ಪ್ರತಿ ಸಾರಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ನಡೆಯುವ ಸಭೆಯಲ್ಲಿ ಕಸದ ಬಗ್ಗೆಯೇ ಚರ್ಚೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT