ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ-ಹ್ಯಾಟಿ ಸೀಮೆಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ರೈತರ ಪಂಪ್ಸೆಟ್ ಕೇಬಲ್ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಬುಧವಾರ ತಡರಾತ್ರಿ ಬಸಪ್ಪ, ಶಿವಪ್ಪ, ಮೈಲಾರಪ್ಪ, ಮಂಜುನಾಥ ಹಾಗೂ ಗುತ್ತೂರಪ್ಪ ಎಂಬುವವರು ಸೇರಿದಂತೆ ಒಟ್ಟು 11 ಜನ ರೈತರ ಪಂಪ್ಸೆಟ್ ಕೇಬಲ್ ಕಳ್ಳತನವಾಗಿದೆ. ರೈತರು ಬೆಳಗಿನ ಜಾವ ನೀರು ಹರಿಸಲು ಹೊಲಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೊದಲೇ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕಳ್ಳರ ಈ ಕೃತ್ಯ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
‘ಒಂದಿಬ್ಬರು ರೈತರ ಹೊಲದಲ್ಲಿನ ಕೇಬಲ್ ಮಾತ್ರ ಕಳ್ಳತನವಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ, ಸರಿಯಾಗಿ ಯೋಜನೆ ರೂಪಿಸಿಯೇ ತಂಡವಾಗಿ ಕಳ್ಳರು ಕೇಬಲ್ ಕದಿಯುತ್ತಿದ್ದಾರೆ. ನಮ್ಮ ಹೊಲದ ಸುತ್ತಮುತ್ತಲಿನ ರೈತರ ಕೇಬಲ್ಗಳಾದರೂ ಉಳಿಯಲಿ. ಪೊಲೀಸರು ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಹಚ್ಚಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.