ಕನಕಗಿರಿ: ಈ ಭಾಗದ ರೈತಾಪಿ ವರ್ಗದವರಿಗೆ ಬೇಡವಾದ ನವಲಿಯ ಸಮಾನಾಂತರ ಜಲಾಶಯ ನಿರ್ಮಾಣದ ಕೆಲಸವನ್ನು ಸರ್ಕಾರ ಕೈ ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಸಮಾನಾಂತರ ಜಲಾಶಯ ನಿರ್ಮಾಣ ವಿರೋಧಿ ಸಮಿತಿ ಬುಧವಾರ ಸಮೀಪದ ಹಿರೇಖೇಡ ಗ್ರಾಮದಲ್ಲಿ ಬುಧವಾರ ನಡೆದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನಾಂತರ ಜಲಾಶಯ ನಿರ್ಮಾಣದಿಂದ ಈ ಭಾಗದ ಬಡವರು, ರೈತಾಪಿ ವರ್ಗದವರು ಬೀದಿಗೆ ಬರುವುದು ಖಚಿತವಾಗಿದೆ. ರಾಜಕೀಯ ಲಾಭಕ್ಕಾಗಿ ಸರ್ಕಾರಗಳು ಆಗಾಗ್ಗೆ ಈ ಯೋಜನೆಯನ್ನು ಪ್ರಸ್ತಾವನೆ ಮಾಡಿ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಜಲಾಶಯ ನಿರ್ಮಾಣದಿಂದ ಈ ಭಾಗ ನೀರಾವರಿ ಆಗುತ್ತದೆ ಎಂಬುದು ಸುಳ್ಳು, ರಾಜಕಾರಣಿಗಳು ಹಾಗೂ ಗುತ್ತಿಗೆದಾರರು ಮಾತ್ರ ಲಾಣ ಪಡೆದುಕೊಳ್ಳುತ್ತಾರೆ , ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು ಪ್ರಚಾರಕ್ಕೆ ಮಾತ್ರ, ಅದು ಘೋಷಣೆಗೆ ಮಾತ್ರ ಸೀಮಿತವಾಗಲಿದೆ ಎಂದು ಟೀಕಿಸಿದರು.
ಸರ್ಕಾರಕ್ಕೆ ನಿಜವಾಗಿ ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ಇಲ್ಲ ಅನೇಕ ವರ್ಷಗಳಿಂದ ಆರಂಭಗೊಂಡಿರುವ ಕೊಪ್ಪಳದ ಏತನೀರಾವರಿ ಯೋಜನೆ ಸಂಪೂರ್ಣವಾಗಿ ಕುಂಠಿತಗೊಂಡಿದೆ, ಚುನಾವಣೆ ಹಾಗೂ ಬಜೆಟ್ ಮಂಡನೆ ಸಮಯದಲ್ಲಿ ನವಲಿ ಜಲಾಶಯ ನಿರ್ಮಾಣದಂತ ಯೋಜನೆಗಳು ಚರ್ಚಿತವಾಗುತ್ತವೆ ಎಂದು ತಿಳಿಸಿದರು.
ಜಲಾಶಯ ನಿರ್ಮಾಣದಿಂದ ಫಲವತ್ತಾದ ಭೂಮಿ, ಮನೆ ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದು ಯೋಜನೆ ಕೈ ಬಿಡಬೇಕೆಂದು ಆಗ್ರಹಿಸಿದರು. ಶಾಸಕ ಬಸವರಾಜ ದಢೇಸೂಗೂರು ಅವರು ಜಲಾಶಯ ನಿರ್ಮಾಣದ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ, ರೈತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಂಘಟನೆಯ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ ಮಾತನಾಡಿ ತಾಂತ್ರಿಕವಾಗಿ ದೇಶ ಮುಂದುವರೆದಿದ್ದು ತುಂಗಾಭದ್ರ ಜಲಾಶಯದಲ್ಲಿ ತುಂಬಿರುವ ಹೂಳನ್ನು ಬೇರೆಡೆಗೆ ಸಾಗಿಸಲು ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ, ಹಿರಿಯ ಮುಖಂಡ ಸಿದ್ದಪ್ಪ ನೀರ್ಲೂಟಿ ಮಾತನಾಡಿದರು. ತಾಲ್ಲೂಕು ಅಧ್ಯಕ್ಷರಾದ ವೀರೇಶ ಹಣವಾಳ, ಶರಣಯ್ಯ, ಸುಂದರರಾಜ, ನಾಗರಾಜ ಇಟಗಿ, ಗಣೇಶರೆಡ್ಡಿ, ಶರಣಪ್ಪ ಗದ್ದು, ಯಂಕನಗೌಡ ಪಾಟೀಲ ಸಮಾವೇಶದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.