ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ಸ್ವಚ್ಛತೆ ಕಾರ್ಯಕ್ಕೆ ‘ಪುರಸ್ಕಾರ’ದ ಗರಿ

‘ಗಾಂಧಿ ಗ್ರಾಮ’ ಪುರಸ್ಕಾರ ಪಡೆದ ಬೆನ್ನೂರ ಗ್ರಾಮ ಪಂಚಾಯಿತಿ: ಅಧಿಕಾರಿಗಳ, ಜನಪ್ರತಿನಿಧಿಗಳ ನಡುವೆ ಸಮನ್ವಯತೆ
Published 1 ಅಕ್ಟೋಬರ್ 2023, 6:47 IST
Last Updated 1 ಅಕ್ಟೋಬರ್ 2023, 6:47 IST
ಅಕ್ಷರ ಗಾತ್ರ

ಕಾರಟಗಿ: ತನ್ನ ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯಕ್ಕಾಗಿ ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿಯು 2022–23ನೇ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರವನ್ನು ಪಡೆದುಕೊಳ್ಳುವ ಮೂಲಕ ಗಮನಸೆಳೆದಿದ್ದು, ಪುರಸ್ಕಾರ ಸಂದಿಸಿರುವುದು ಗ್ರಾಮದ ಜನರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದಲ್ಲಿ ಸಂತಸವನ್ನುಂಟು ಮಾಡಿದೆ. ಪ್ರಶಸ್ತಿಯು ರಾಷ್ಟ್ರಮಟ್ಟದಲ್ಲಿ ನಡೆದಿರುವ ಸ್ವಚ್ಛತೆ ವಿಷಯಕ್ಕೆ ದೊರೆತಿರುವುದು ಮತ್ತಷ್ಟು ಖುಷಿಯನ್ನು ಹೆಚ್ಚಿಸಿದೆ.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ಶಾಲಿಗನೂರ ಗ್ರಾಮದಲ್ಲಿ ಪ್ರತಿ ಮನೆಗೆ ಪೈಪ್‌ ಹಾಕಿ ಹಸಿ ಕಸ ಸಂಗ್ರಹಿಸಿ ಗೊಬ್ಬರವನ್ನಾಗಿ ಬಳಸುವಂತೆ ಮಾಡಲಾಗಿದೆ. ಸ್ವಸಹಾಯ ಗುಂಪಿನ ಮಹಿಳೆಯರೇ ಮನೆ, ಮನೆಗೆ ಸಂಚರಿಸಿ ಕಸ ಸಂಗ್ರಹಿಸಿ, ವಿಂಗಡಿಸಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅದನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಮನೆಯವರು ಕಸ ಸಂಗ್ರಹಣೆಗೆ ಮಾಸಿಕ ₹ 30 ನೀಡಿ ಸಹಕರಿಸುತ್ತಿದ್ದಾರೆ. ಆರಂಭದಲ್ಲಿ ವಿರೋಧವಿತ್ತಾದರೂ ಇತ್ತೀಚೆಗೆ ಜನರು ಸಹಕರಿಸುತ್ತಿದ್ದಾರೆ. 

‘ಜನರಿಗೆ ಕುಡಿಯುವ ನೀರು, ವಿದ್ಯುತ್‌ ದೀಪ ಸಹಿತ ಇತರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, ಕರ ವಸೂಲಿ ತೃಪ್ತಿಕರವಾಗಿದೆ. ನರೇಗಾದಡಿ ಹೆಚ್ಚು ಕೂಲಿ ಕೆಲಸ, ಸಕಾಲಕ್ಕೆ ಕೂಲಿ ಹಣ ಪಾವತಿ ಮಾಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಪ್ರಶಸ್ತಿ ದೊರಕಿದೆ. ಪ್ರಶಸ್ತಿಯಿಂದ ಸಂತೋಷ ತಂದಿದೆ. ಜವಾಬ್ದಾರಿಯೂ ಹೆಚ್ಚಾಗಿದೆ’ ಎಂದು ಬೆನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದ ಪರಿಣಾಮ ಪ್ರಶಸ್ತಿ ಸಂದಿದೆ.  ಸಿಮೆಂಟ್‌ ಚರಂಡಿ, ಶಾಲೆ, ಅಂಗನವಾಡಿಗಳಿಗೆ ಆವರಣ ಗೋಡೆ ನಿರ್ಮಾಣ ಸೇರಿ ಇತ ಇತರೆ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಸಾಹುಕಾರ ಕಕ್ಕರಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ವ್ಯಾಪ್ತಿಯ ಪಂಚಾಯಿತಿಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇದು ಮತ್ತಷ್ಟು ಪಂಚಾಯಿತಿಗಳು ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡಿದೆ. ಉಳಿದವರೂ ಜನರ ಅಗತ್ಯತೆಗೆ ಶೀಘ್ರವೇ ಸ್ಪಂದಿಸಿ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ನರಸಪ್ಪ ಎನ್‌ ಪ್ರತಿಕ್ರಿಯಸಿದರು.

ಗ್ರಾಪಂ ಕಚೇರಿ ಕಟ್ಟಡ
ಗ್ರಾಪಂ ಕಚೇರಿ ಕಟ್ಟಡ
ಶರಣಪ್ಪ ಸಾಹುಕಾರ ಕಕ್ಕರಗೋಳ ಅಧ್ಯಕ್ಷ
ಶರಣಪ್ಪ ಸಾಹುಕಾರ ಕಕ್ಕರಗೋಳ ಅಧ್ಯಕ್ಷ
ಪ್ರಶಸ್ತಿ ದೊರಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರ ಕೆಲಸ ಸೌಲಭ್ಯ ಕಲ್ಪಿಸಲು ಮತ್ತಷ್ಟು ಉತ್ಸಹದಿಂದ ಕೆಲಸ ಮಾಡಲಾಗುವುದು
- ಶರಣಪ್ಪ ಸಾಹುಕಾರ ಅಧ್ಯಕ್ಷ ಬೆನ್ನೂರ ಗ್ರಾ.ಪಂ.
ಎಲ್ಲರ ಸಹಕಾರದೊಂದಿಗೆ ನಮ್ಮ ಕೆಲಸವನ್ನು ಉತ್ಸಾಹದಿಂದ ಮಾಡಿದ್ದೇವೆ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲವನ್ನೂ ಎಲ್ಲರ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸಲಾಗುವುದು.
ಭಾಗ್ಯೇಶ್ವರಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT