ಕೊಪ್ಪಳ: ‘ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕರು ಹೋರಾಟ ಮಾಡಿದ್ದಾರೆ. ಆದರೆ, ಬಿ.ಎಲ್. ಸಂತೋಷ್ ಒಳಗೊಂಡಂತೆ ಬಿಜೆಪಿಯ ಯಾವ ನಾಯಕರಾದರೂ ದೇಶಕ್ಕಾಗಿ ಹೋರಾಡಿದ್ದಾರೆಯೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಇತಿಹಾಸ ತಿರುಚಿದವರು ಎಂದಾದರೂ ಸತ್ಯ ಹೇಳಲು ಸಾಧ್ಯವೇ? ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಒಬ್ಬ ನಾಯಕರಾದರೂ ಜೀವ ಕೊಟ್ಟಿದ್ದಾರೆಯೇ. ಬಿಜೆಪಿಯವರು ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜೆಸುತ್ತಾರೆ’ ಎಂದು ತಿರುಗೇಟು ನೀಡಿದರು.
‘ಭಾರತ್ ಜೋಡೊ ಯಾತ್ರೆ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಕೋಮ ದ್ವೇಷದಿಂದ ತತ್ತರಿಸಿ ಹೋಗಿರುವ ಮನಸ್ಸುಗಳನ್ನು ಈ ಯಾತ್ರೆಯ ಮೂಲಕ ಒಂದುಗೂಡಿಸಲಾಗುತ್ತಿದೆ. ಅ. 15ರಂದು ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ಜೋಡೊ ಯಾತ್ರೆಯ ವೇಳೆ ರಾಜ್ಯದಲ್ಲಿ ಆಯೋಜಿಸಿರುವ ಏಕೈಕ ಸಮಾವೇಶ ಇದು’ ಎಂದರು.
‘ಆರೋಗ್ಯ ಸುಧಾರಣೆಗೆ ಕಾಂಗ್ರೆಸ್ ನಾಯಕರು ಯಾತ್ರೆ ಮಾಡುತ್ತಿದ್ದಾರೆ’ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ ’ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಈಗ ಮಾಡುತ್ತಿರುವ ಯಾತ್ರೆ ಯಾಕಾಗಿ’ ಎಂದು ಪ್ರಶ್ನಿಸಿದರು.