ಕೊಪ್ಪಳ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ, ಸುಳ್ಳಿನ ಸರದಾರ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವುದು ಸುಳ್ಳಿನ ಸರ್ಕಾರ. ಇವರಿಗೆ ನಿಜಕ್ಕೂ ಧಮ್ ಇದ್ರೆ ಈ ವಿಧಾನಸಭೆ ವಿಸರ್ಜನೆ ಮಾಡಲಿ' ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಸವಾಲು ಹಾಕಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಪ್ರವಾಹದಿಂದ 22 ಜಿಲ್ಲೆಗಳ 103 ತಾಲ್ಲೂಕಿನ ಜನ ತತ್ತರಿಸಿದ್ದಾರೆ. 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 115 ಜನ ಮಳೆಯಿಂದ ಸಾವನ್ನಪ್ಪಿದ್ದಾರೆ. ಪ್ರವಾಹದಿಂದ 1 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಆದರೆ, ಕೇಂದ್ರದಿಂದ ಈವರೆಗೆ 1,200 ಕೋಟಿ ಮಾತ್ರ ಪರಿಹಾರ ಹಣ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೂ ರಾಜ್ಯದಲ್ಲೂ ಬಿಜೆಪಿ ನಾಯಕರು ಅಧಿಕಾರ ಉಳಿಸಿಕೊಳ್ಳುವ ಜಂಜಾಟದಲ್ಲಿದ್ದು ನೆರೆ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ' ಎಂದು ಆರೋಪಿಸಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರಿಗೆ ಸಾವರ್ಕರ್, ಶಿವಾಜಿ, ಪಟೇಲ್ ನೆನಪಾಗುತ್ತಾರೆ. ಜನರ ದಾರಿತಪ್ಪಿಸಲು ಭಾವನಾತ್ಮಕ ವಿಚಾರಗಳನ್ನು ಹರಿಬಿಡುತ್ತಾರೆ. ಈಗ ಟಿಪ್ಪು ಜಯಂತಿವಿಚಾರ ಮುನ್ನೆಲೆಗೆ ತಂದು ಗೊಂದಲ ಮಾಡುತ್ತಿದ್ದಾರೆ. ಈ ಹಿಂದೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಬೆಂಗಳೂರಿಗೆಬಂದಾಗ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗಲೂ ಗುಣಗಾನ ಮಾಡಿದ್ದರು. ಜಯಂತಿ ಮುಂದಿಟ್ಟು ಗೋಸುಂಬಿ ರಾಜ ಕಾರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿಸಿದರು.
ಬಳ್ಳಾರಿ ಜಿಲ್ಲೆ ಇಬ್ಭಾಗ ಮಾಡಲು ಹೊರಟಿರುವವರು ಏನೂ ಕೆಲಸ ಮಾಡಿಲ್ಲ ಎಂದು ಜನರಿಗೆ ಗೊತ್ತಿದೆ ಎಂದು ಅಪರೋಕ್ಷವಾಗಿ ಆನಂದ ಸಿಂಗ್ಗೆ ಟಾಂಗ್ ನೀಡಿದರು. ಬಳ್ಳಾರಿ ಜಿಲ್ಲೆಗೆ ರೋಚಕ ಇತಿಹಾಸವಿದೆ. ಯಾರೋ ಒಬ್ಬ ರಾಜಕಾರಣಿಯಿಂದ ಜಿಲ್ಲೆ ಮಾಡಲು ಬರುವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಹೊಸ ಜಿಲ್ಲೆ ಬೇಕೋ, ಬೇಡವೋ ಎಂಬ ತೀರ್ಮಾನ ವಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಮುಖಂಡರಾದ ಜುಲ್ಲು ಖಾದ್ರಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಬಿ.ನಾಗರ ಹಳ್ಳಿ, ಟಿ.ರತ್ನಾಕರ್, ರಾಜಶೇಖರ ಹಿಟ್ನಾಳ, ಕೃಷ್ಣ ಇಟ್ಟಂಗಿ, ರಾಮಣ್ಣ ಕಲ್ಲಣ್ಣನವರ, ಅಮ್ಜದ್ಪಟೇಲ್ ಇದ್ದರು.