ಕಾರಟಗಿ: ಸಮಪಾಲು, ಸಮಬಾಳು, ಸಮಾನ ಸಮಾಜವೇ ರಾಮರಾಜ್ಯ ಎಂಬುದನ್ನು ತಮ್ಮ ರಾಮಾಯಣದ ಮೂಲಕ ಮನುಕುಲಕ್ಕೆ ಆದರ್ಶದ ಹಾದಿ ತೋರಿದ ಮಹರ್ಷಿ ವಾಲ್ಮೀಕಿಯವರ ಜಯಂತಿಯು ಜಾತಿಗೆ ಸೀಮಿತಗೊಳ್ಳದೇ ಸರ್ವರ ಉತ್ಸವವಾಗಬೇಕು ಎಂದು ಶಾಸಕ ಬಸವರಾಜ ದಢೇಸುಗೂರ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕಾಡಳಿತ ಹಾಗೂ ಸಮಾಜ ಬಾಂಧವರಿಂದ ಬುಧವಾರ ವಿಜೃಂಭಣೆಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಹಾಗೂ ವಿಶೇಷ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಮಾಯಣ ಮಹಾ ಕಾವ್ಯದ ಮೂಲಕ ಸ್ವಸ್ಥ ಸಮಾಜದ ಬುನಾದಿ ಹಾಕಿಕೊಟ್ಟವರು ಮಹರ್ಷಿ ವಾಲ್ಮೀಕಿಯವರ ಚಿಂತನೆ ಹಾಗೂ ಆದರ್ಶಗಳು ಸರ್ವಕಾಲಿಕವಾಗಿ ಮೌಲ್ಯಯುತವಾಗಿವೆ. ಅವರ ಆದರ್ಶ ಮಾದರಿಯದು. ಮಹರ್ಷಿ ವಾಲ್ಮೀಕಿ ಸಮತ್ವ ಹಾಗೂ ಮಾನವೀಯ ಜೀವನ ಮೌಲ್ಯಗಳನ್ನು ಹಾಗೂ ನಡೆ, ನುಡಿ, ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ
ಅಳವಡಿಸಿಕೊಂಡಾಗಲೇ ಅವರಿಗೆ ನೈಜವಾದ ಗೌರವ ಸಲ್ಲಿಕೆಯಾದಂತೆ ಎಂದರು.
ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಮಾತನಾಡಿ, ವಾಲ್ಮೀಕಿ ಸಮುದಾಯವು ಹೋರಾಟ ಮನೋಭಾವದ್ದಾಗಿದೆ. ಸಮಾಜ ಬಾಂಧವರ ಒಗ್ಗಟ್ಟು ಹಾಗೂ ಸಾಮಾಜಿಕ ಪ್ರಜ್ಞೆ, ಚಿಂತನೆಗಳು ಇತರರಿಗೆ ಮಾದರಿಯಾಗಿವೆ. ಸಮಾಜ ಬಾಂಧವರು ತಮ್ಮ ಹೋರಾಟದ ಶಕ್ತಿಯನ್ನು ಸಮಾಜ ವಿರೋಧಿ ಕೆಲಸಗಳಿಗೆ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಹೋರಾಟದ ಶಕ್ತಿಯನ್ನು ಸಮಾಜದ ಆರೋಗ್ಯಕರವಾದ ಬೆಳವಣೆಗೆ ಬಳಸಿದರೆ ಸಮುದಾಯದ ಘನತೆ, ಗೌರವ ಅಧಿಕವಾಗುವುದು ಎಂದರು.
ಉಪನ್ಯಾಸಕ ಡಿ. ಬಿ. ಕರಡೋಣಿ ವಿಶೇಷ ಉಪನ್ಯಾಸ ನೀಡಿದರು.
ಪುರಸಭೆಯಿಂದ ವಿಶೇಷ ಎಪಿಎಂಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಕುಂಭ, ಕಳಸ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು, ಜನಪ್ರತಿನಿಧಿಗಳು ಮೆರವಣಿಗೆಯ ಕಳೆ ಹೆಚ್ಚಿಸಿದರು.
ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ ಮುಷ್ಟೂರು, ಸದಸ್ಯ ಅರಳಿ ನಾಗರಾಜ್, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಯರಡೋಣ, ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಗದ್ದೆಪ್ಪ ನಾಯಕ, ಯುವ ಘಟಕದ ಅಧ್ಯಕ್ಷ ಮಂಜುನಾಥ ನಾಯಕ, ತಹಶೀಲ್ದಾರ್ ರವಿ ಎಸ್. ಅಂಗಡಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ
ರಾಯನಗೌಡ, ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ, ಪ್ರಮುಖರಾದ ವೀರೇಶ ಸಾಲೋಣಿ, ಬಿ. ಬಸವರಾಜಪ್ಪ, ಎಸ್. ಇ. ಪ್ರಹ್ಲಾದ ಶ್ರೇಷ್ಠಿ, ಡಾ. ಕೆ. ಎನ್ ಪಾಟೀಲ್, ಶಿವರೆಡ್ಡಿ ನಾಯಕ, ನಾಗರಾಜ್ ಬಿಲ್ಗಾರ, ಶೇಷಗಿರಿ ವಕೀಲ, ರಾಮಮೋಹನ್, ರಮೇಶ ಜನೌಷಧಿ, ಚನ್ನಬಸಪ್ಪ ಸುಂಕದ, ಬಿ.ಕಾಶಿವಿಶ್ವನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.