ಕೊಪ್ಪಳ: ಜಿಲ್ಲೆಯ ಕಾರಟಗಿ ಸುತ್ತಮುತ್ತ ಭಾನುವಾರ ಭಾರಿ ಪ್ರಮಾಣದ ಗಾಳಿ ಮಳೆ ಆಗಿದೆ. ಬಸವಣ್ಣ ಕ್ಯಾಂಪ್, ನಾಗನಕಲ್ಲು, ಪನ್ನಾಪುರ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಆಗಿದ್ದು ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ.
ಇದೇ ಪ್ರದೇಶದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಬಸವಣ್ಣ ಕ್ಯಾಂಪ್ ನಿವಾಸಿ ಪ್ರಸಾದ್ ವಿವರಿಸಿದರು.ಕಾರಟಗಿಯಲ್ಲಿ ಅಕ್ಕಿ ಗಿರಣಿಯ ಸೂರಿನ ತಗಡು ಹಾರಿ ಹಾನಿಯಾಗಿದೆ. ಬಿರುಗಾಳಿಯ ರಭಸಕ್ಕೆ ಹಲವಾರು ಮರಗಳು ಉರುಳಿಬಿದ್ದಿವೆ. ಹಾಕಿದ ಪೆಂಡಾಲ್ ಉರುಳಿದ ಪರಿಣಾಮ ಕಾರು ಸೇರಿದಂತೆ ಕೆಲವು ವಾಹನಗಳು ಜಖಂಗೊಂಡಿವೆ.
ಕುಷ್ಟಗಿ ವರದಿ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿರುವ ಬಗ್ಗೆ ತಿಳಿದಿದೆ.ತೋಪಲಕಟ್ಟಿ, ವಣಗೇರಿ, ತಳುವಗೇರಾ, ಸಂಗನಾಳ ಮತ್ತಿತರೆಡೆ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಆದರೆ, ಬಿರುಗಾಳಿ, ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು.
ಕೆಲ ಗ್ರಾಮಗಳಲ್ಲಿ ಗಾಳಿಗೆ ಛಾವಣಿಗಳು ಹಾರಿ ಹೋಗಿರುವುದು ಗೊತ್ತಾಗಿದೆ. ತಾಲ್ಲೂಕಿನಲ್ಲಿ ಯಾವುದೇ ಮಳೆ ಗಾಳಿ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿಲ್ಲ ಎಂದು ತಹಶೀಲ್ದಾರ್ ಎಚ್.ವಿಶ್ವನಾಥ ಹೇಳಿದರು.