ಕನಕಗಿರಿ: ಮಾಜಿ ಸಚಿವ ಎಂ. ಮಲ್ಲಿಕಾ ರ್ಜುನ ನಾಗಪ್ಪ ಅವರು ಸಚಿವರಾಗಿದ್ದ 1999–2004ರ ಅವಧಿಯಲ್ಲಿ ಬಡ ಜನತೆಗೆ ಹಂಚಿಕೆ ಮಾಡಲು ಖರೀದಿಸಿದ್ದ ನವ ಗ್ರಾಮ ಯೋಜನೆಯ ಎರಡು ಎಕರೆ ಭೂಮಿ ಸದ್ಬಳಕೆಯಾಗಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ರುದ್ರಸ್ವಾಮಿ ಹಾಗೂ ಶಿವಯೋಗಿ ಚನ್ನಮಲ್ಲಸ್ವಾಮಿ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ವ್ಯಾಪ್ತಿಯಲ್ಲಿದೆ. ಅದನ್ನು ಪಟ್ಟಣ ಪಂಚಾಯಿತಿ ಆಸ್ತಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದ್ದು, ಆಡಳಿತ ಮಂಡಳಿ ಸದಸ್ಯರು ಪಕ್ಷಭೇದ ಮರೆತು ಸಹಕಾರ ನೀಡಬೇಕು ಎಂದರು.
‘ನವಗ್ರಾಮ ಯೋಜನೆಯ ಅಡಿಯಲ್ಲಿ ಸದರಿ ಭೂಮಿಯನ್ನು ಸರ್ಕಾರ ಖರೀದಿಸಿದ್ದು, ನಿವೇಶನ ಹಂಚಿಕೆ ಮಾಡಿ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದೆ. ಸದ್ಯ ಶಾಲೆಯವರು ಹೊರಗೋಡೆ ನಿರ್ಮಾಣ ಮಾಡಿ ಭೂಮಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.
ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರೊಂದಿಗೆ ಶೀಘ್ರದಲ್ಲಿಯೆ ಚರ್ಚಿಸಿ ಆಸ್ತಿಯನ್ನು ವಶಕ್ಕೆ ಪಡೆಯಲಾ ಗುವುದು. ಈಗಾಗಲೆ ಹಕ್ಕು ಪತ್ರ ನೀಡಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ತೆಗೆದು ಕೊಳ್ಳಲಾಗುವುದು’ ಎಂದರು.
‘ಐತಿಹಾಸಿಕ ಕನಕಾಚಲಪತಿ ಜಾತ್ರಾ ಮಹೋತ್ಸವದ ನಿಮಿತ್ತ ಕುಡಿಯುವ ನೀರು ಪೂರೈಸಲು ನಿರ್ಧರಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆಗೆ ಪಟ್ಟಣ ಪಂಚಾಯಿತಿ ಕ್ರಮ ತೆಗೆದುಕೊಂಡಿದೆ. ಶುದ್ಧ ಕುಡಿಯುವ ನೀರಿನ ಘಟಕದ ಮಾಲೀಕರು, ಹೋಟೆಲ್ ಹಾಗೂ ತಂಪುಪಾನೀಯ ಅಂಗಡಿ ಮಾಲೀಕರ ಸಭೆ ನಡೆಸಿ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡ ದಂತೆ ಕೋರಲಾಗುವುದು’ ಎಂದರು.
ನಾಮನಿರ್ದೇಶಿತ ಸದಸ್ಯ ವೆಂಕಟೇಶ ಕುಲಕರ್ಣಿ ಮಾತನಾಡಿ, ‘ನವ ಗ್ರಾಮ ಯೋಜನೆಯಲ್ಲಿ ಖರೀದಿಸಿದ ಭೂಮಿ ಪಟ್ಟಣ ಪಂಚಾಯಿತಿಗೆ ಸೇರಿದ್ದು, ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು’ ಎಂದು ತಿಳಿಸಿದರು.
ಮುಖ್ಯಾಧಿಕಾರಿ ಮಹೇಶ ನಿಡಶೇಷಿ ಮಾತನಾಡಿ, ‘2017–18ನೇ ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ ₹1. 88 ಕೋಟಿ, ರಾಜ್ಯ ಹಣಕಾಸು ಆಯೋಗ ವತಿಯಿಂದ ₹2.43 ಕೋಟಿ ಅನುದಾನ ಮಂಜೂರಾಗಿದೆ.
ಒಳಚರಂಡಿ ಕಾಮಗಾರಿ ಸಮೀಕ್ಷೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಸಿ.ಸಿ ರಸ್ತೆ ನಿರ್ಮಾಣ, ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿ, ಚರಂಡಿ ನಿರ್ಮಾಣ, ಸಮುದಾಯ ಆಸ್ತಿ ನಿರ್ವಹಣೆ, ಸ್ಮಶಾನ, ಚಿತಾಗಾರ ಅಭಿವೃದ್ಧಿ, ವಿದ್ಯುತ್ ದೀಪ, ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಗಡಾದ, ಸದಸ್ಯರಾದ ಕೆ,ಸುಭಾಸ, ಶರಣಬಸವ ಭತ್ತದ, ಹುಸೇನ್ಸಾಬ ಸೂಳೇಕಲ್, ಮಹ್ಮದ ಪಾಷ ಮುಲ್ಲಾರ, ರವೀಂದ್ರ ಸಜ್ಜನ್, ಹುಲಗಪ್ಪ ವಾಲೇಕಾರ, ಆಫೀಜಾ ಬೇಗ್ಂ, ತಿಪ್ಪಣ ನಾಯಕ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಸಿಬ್ಬಂದಿ ಗಾಯಿತ್ರಿ ಕವಲೂರು, ಕರ ವಸೂಲಿಗಾರ ಕನಕಪ್ಪ ನಾಯಕ ವಿವಿಧ ವಿಷಯ ಮಂಡಿಸಿದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶಬನಾ ಮೌಲಾಹುಸೇನ್ ಸಿಕ್ಲಗಾರ, ಸದಸ್ಯರಾದ ಸರಸ್ವತಿ ಸಣ್ಣ ಕನಕಪ್ಪ, ಮಂಜುನಾಥ ಮಾದಿನಾಳ, ನಾಮಕರಣ ಸದಸ್ಯ ಅನಂತಪ್ಪ, ಯಮನಪ್ಪ ಸೂಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.