ಯಲಬುರ್ಗಾ: ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣ ಜಾರಿಗೊಳಿಸುವ ಬದಲಾಗಿ ಸರ್ಕಾರಗಳು ಶಿಕ್ಷಣವನ್ನು ಕೇಸರಿಕರಣ ಹಾಗೂ ವ್ಯಾಪಾರೀಕರಣಗೊಳಿಸುವ ಮೂಲಕ ಶಿಕ್ಷಣದ ಮೂಲ ಆಶಯವನ್ನೇ ಹಾಳುಮಾಡುತ್ತಿವೆ, ಇದು ಆತಂಕಕಾರಿ ಬೆಳವಣಿಗೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಅನಿಲಕುಮಾರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಎರಡನೇ ತಾಲ್ಲೂಕು ಮಟ್ಟದ ಎಸ್ಏಫ್ಐ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರು ತಿಂಗಳ ಅಥವಾ ವರ್ಷದ ಮಟ್ಟಿಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಅವೈಜ್ಞಾನಿಕವಾಗಿದೆ, ಇದು ಶಿಕ್ಷಣ ಸುಧಾರಣೆಗೆ ಮಾರಕವಾಗಿದೆ ಎಂದರು.
ಅತಿಥಿಯಾಗಿದ್ದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಿವರಾಜ ಗುರಿಕಾರ ಮಾತನಾಡಿ, ಸುಮಾರು ವರ್ಷಗಳಿಂದಲೂ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡುವಲ್ಲಿ ನಿರಂತರ ಹೋರಾಟದ ಜೊತೆಗೆ ಸಾಮಾಜಿಕ ಸುಧಾರಣೆಯ ಕಳಕಳಿ ವ್ಯಕ್ತಪಡಿಸುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಷನ್ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ.
ಹೋರಾಟದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಎಸ್ಏಫ್ಐ ಶಿಕ್ಷಣ ರಂಗದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಇನ್ನಷ್ಟು ಕ್ರೀಯಾಶೀಲರಾಗಬೇಕಾಗಿದೆ ಎಂದರು.
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶರಣಪ್ಪ ಕುಂಬಾರ, ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಸ್ಏಫ್ಐ ಅಧ್ಯಕ್ಷ ಹನಮಂತ ಭಜಂತ್ರಿ ಮಾತನಾಡಿ, ಮಕ್ಕಳಿಗೆ ಸ್ವಾಭಿಮಾನದ ಜೀವನಕ್ಕೆ ಪ್ರೇರಣೆ ನೀಡುವುದು, ಕ್ರೀಯಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಿಕೊಡುವಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ನುಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ದೇಸಾಯಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಕವಲೂರ ಸ್ವಾಗತಿಸಿದರು. ಉಮೇಶ ಗುಡದಪ್ಪನವರ ನಿರೂಪಿಸಿದರು. ರಾಶೀದ ಖಾಜಿ ವಂದಿಸಿದರು.