ಕುಷ್ಟಗಿ: ಯಾವುದೇ ಚುನಾವಣೆಗಳಿರಲಿ ಜಾತಿ, ಹಣ ನೋಡಬಾರದು ಊರಿಗೆ ಒಳ್ಳೆಯದನ್ನು ಬಯಸುವಂಥ ಅಭ್ಯರ್ಥಿಗಳಿಗೆ ಮನ್ನಣೆ ನೀಡುವ ಮನಸ್ಥಿತಿ ಹೊಂದುವುದು ಅಗತ್ಯವಿದೆ ಎಂದು ಇಲ್ಲಿನ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಮಹೇಶ್ ಗುರುವಾರ ಹೇಳಿದರು.
ಪಟ್ಟಣದ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ದೇಶದ ಸಂವಿಧಾನ ಮತ್ತು ಕಾನೂನಿಲ್ಲಿರುವ ಅಂಶಗಳನ್ನು ಅರಿಯಬೇಕು. ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಸರ್ಕಾರಿ ವಕೀಲ ಎ.ಐ.ಹಾದಿಮನಿ ಪೋಕ್ಸೊ ಕಾನೂನು ವಿಷಯ ಕುರಿತು ಹಾಗೂ ವಕೀಲ ಎಂ.ಬಿ.ಕೊನಸಾಗರ ಭಾರತದ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಸವಾರಾಜ ಇದ್ಲಾಪುರ ಭಾಗವಹಿಸಿದ್ದರು. ವಿದ್ಯಾಥಿ ಕನಕರಾಯ ನಿರೂಪಿಸಿದರು.