ಭಾರತೀನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಜೈ ಭೀಮ್ ದಲಿತ ಜಾಗೃತಿ ಸಮಿತಿಯ ಅಧ್ಯಕ್ಷ ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ, ನೂರಾರು ಸಂಖ್ಯೆಯ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಉದಯ್ ಮಾತನಾಡಿ, ಕಾಂಗ್ರೆಸ್ನೇತೃತ್ವದ ಸಿದ್ದಾಂತಗಳನ್ನು ಮೆಚ್ಚಿ, ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ ಕಾಂಗ್ರೆಸ್ ಸೇರ್ಪಡೆಯಿಂದಾಗಿ ನನಗೆ ಒಬ್ಬ ಉತ್ತಮ ಮಾರ್ಗದರ್ಶಕ ಸಿಕ್ಕಂತಾಗಿದೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ದೀನ ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ, ದುರ್ಬಲ ವರ್ಗದವರ ಆಶೋತ್ತರಗಳನ್ನು ಕಾಂಗ್ರೆಸ್ ಈಡೇರಿಸುತ್ತಿದೆ. ಸರ್ವರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಣತೊಟ್ಟಿದೆ. ಎಲ್ಲರೂ ಬೆಂಬಲಿಸುವುದರ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ ಅವರು ಮಾತನಾಡಿ, ‘ಪ್ರಸ್ತುತ ಸಂದರ್ಭ ಕೋಮುವಾದಿಗಳು ಅಧಿಕಾರ ಹಿಡಿದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಅಂತಹ ದುಷ್ಟ ಸರ್ಕಾರವನ್ನು ತೊಲಗಿಸಲು ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಪ್ರಸ್ತುತ ಬೇರೆ ಯಾವುದೇ ಆಯ್ಕೆಗಳಿಲ್ಲದ ಕಾರಣ ಕಾಂಗ್ರೆಸ್ ಬೆಂಬಲಿಸುವುದು ಅನಿವಾರ್ಯವೂ ಆಗಿದೆ. ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಸಂವಿಧಾನ ಉಳಿಸಿ ಎಂಬ ಘೋಷಣೆ ನಮ್ಮದಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ. ಬಸವರಾಜು, ಮಾಜಿ ಸದಸ್ಯ ಎ.ಎಸ್. ರಾಜೀವ, ಮುಖಂಡ ಎಂ.ಸಿ. ಬಸವರಾಜು, ನಿವೃತ್ತ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ಮುಖಂಡರಾದ ಅಣ್ಣೂರು ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ ಮಲ್ಲಿಗೆ ಮಹದೇವಮ್ಮ, ಹುರಗಲವಾಡಿ ರಾಮಯ್ಯಉಪಸ್ಥಿತರಿದ್ದರು.
ಜಾಣಪ್ಪ, ಕೆ. ಮಾದೇಗೌಡ, ಬನ್ನಹಳ್ಳಿ ಸುಂದರಮ್ಮ. ಮಾಲಯ್ಯ, ಕರಡಕೆರೆ ಶಿವಲಿಂಗಯ್ಯ, ಬಿದರಹೊಸಹಳ್ಳಿ ಚಿಕ್ಕಣ್ಣ, ಹೊನ್ನಲಗೆರೆ ನಾಗೇಶ, ಗೋಪನಹಳ್ಳಿ ಮುತ್ತಯ್ಯ, ಕಾಡುಕೊತ್ತನಹಳ್ಳಿ ರುದ್ರಕುಮಾರ, ಹುರಗಲವಾಡಿ ರಾಮಯ್ಯ, ಭುಜುವಳ್ಳಿ ಚನ್ನಯ್ಯ ಇನ್ನು ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು.