ಭಾರತೀನಗರ:ಜೆಡಿಎಸ್ ಪಕ್ಷ ಸಂಘಟಿ ಸಲುದಿಟ್ಟತನದಿಂದ ಹೋರಾಡುತ್ತೇನೆ. ಹಣದಿಂದ ಚುನಾವಣೆ ಗೆಲ್ಲುವ ಕನಸು ಕಟ್ಟಿಕೊಂಡಿರುವರಿಗೆ ಬೆದರಿ ಓಡಿ ಹೋಗುವುದಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಟೀಕಿಸಿದರು.
ಇಲ್ಲಿನ ದೊಡ್ಡರಸಿನಕೆರೆ ಗೇಟ್ ಬಳಿಯ ಎಸ್ವೈಎಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಚಿಕ್ಕರಸಿನಕೆರೆ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
1994ರಲ್ಲಿ ಕೆ.ಎನ್.ನಾಗೇಗೌಡ ಅವರ ಎದುರು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರ ಎದುರು ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ ನಾನೂ ಇಲ್ಲಿಯ ಜನರಿಗೂ ಹೊಸಬನಾಗಿದ್ದೆ. ಆದರೆ, ಅಂದು ಹೇಡಿಯ ರೀತಿ ಓಡಿ ಹೋಗದೆ ಜನರ ಬಳಿಗೆ ಹೋಗಿ ಹೋರಾಟ ಮಾಡಿದೆ ಎಂದರು.
ಈಗಲೂ ಹಣ ಚೆಲ್ಲಿ ಚುನಾವಣೆ ಗೆಲ್ಲಬಹುದೆಂಬ ಭ್ರಮೆಯಲ್ಲಿ ಕೆಲವು ಮಂದಿ ಓಡಾಡುತ್ತಿದ್ದು, ಅವರಿಗೆ ಹೆದರಿ ಓಡಿ ಹೋಗಿ ನಾನು ಹೇಡಿಯಾಗಲು ಇಚ್ಛಿಸುವುದಿಲ್ಲ. ನನಗೆ ಹೋರಾಟದ ಮನೋಭಾವ ಚಿಕ್ಕಂದಿನಿಂದಲೂ ಇದೆ. ದಿಟ್ಟತನದಿಂದ ಹೋರಾಡುತ್ತೇನೆ ಹಾಗೂ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಆತಗೂರು ಜಿ.ಪಂ.ಸದಸ್ಯ ಬಿಳಿಯಪ್ಪ, ಜಿ.ಪಂ.ಮಾಜಿ ಸದಸ್ಯ ರವಿ, ಪುರಸಭೆ ಅಧ್ಯಕ್ಷ ಬಸವರಾಜು, ಸದಸ್ಯ ಆದಿಲ್ಪಾಷ, ಮಾದನಾಯಕನಹಳ್ಳಿ ರಾಜಣ್ಣ ಇದ್ದರು.