ಮಂಡ್ಯ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮೇಲೆ ಪ್ರತ್ಯೇಕವಾಗಿ ನಾಡಧ್ವಜ ಹಾರಿಸಿದರು.
ಮೊದಲೇ ವಿಷಯ ಅರಿತಿದ್ದ ಪೊಲೀಸರು ಧ್ವಜಾರೋಹಣ ತಡೆಯಲು ಯತ್ನಿಸಿದರು. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಗೊಂದಲದ ನಡುವೆಯೇ ನಾಡಧ್ವಜ ಹಾರಿಸುವಲ್ಲಿ ಯಶಸ್ವಿಯಾದರು. ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಧ್ವಜ ತೆರವುಗೊಳಿಸಿದರು.
ನಾವು ಕನ್ನಡ ನಾಡಿನ ಧ್ವಜ ಹಾರಿಸುತ್ತಿದ್ದೇವೆ, ಐಎಸ್ಐಎಸ್ ಧ್ವಜ ಹಾರಿಸುತ್ತಿಲ್ಲ. ಕರ್ನಾಟಕ ರಾಜ್ಯೋತ್ಸವದ ದಿನ ನಾಡಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು. ಇದಕ್ಕೆ ಸರ್ಕಾರ ಅಡ್ಡಿಪಡಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯಕರ್ತರು ಹೇಳಿದರು.
ಈ ಸಂದರ್ಭದಲ್ಲಿ ಷಣ್ಮುಖೇಗೌಡ, ಅಭಿಗೌಡ, ಎಂ.ಬಿ.ನಾಗಣ್ಣಗೌಡ, ಬೂದನೂರು ಸತೀಶ, ಸಂಪತ್ ಕುಮಾರ್ ಇದ್ದರು.