ನಾಗಮಂಗಲ: ಸೋಂಕಿತ ವ್ಯಕ್ತಿಗಳು ನಿರ್ಲಕ್ಷ್ಯ ತೋರಿದರೆ ಹೆಚ್ಚು ಮಂದಿಗೆ ಸೋಂಕು ಹರಡುವ ಅಪಾಯವಿದೆ. ಹೋಂ ಐಸೋಲೇಷನ್ನಲ್ಲಿ ಇರುವ ಸೋಂಕಿತರು ಸಾರ್ವಜನಿಕವಾಗಿ ಓಡಾಡಿದರೆ ಎಫ್ಐಆರ್ ದಾಖಲಿಸಿ ಎಂದು ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಹಬ್ಬ, ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಿದರೆ ಅಂಥ ಗ್ರಾಮಗಳ ಮುಖಂಡರ ಮೇಲೆ ಕ್ರಮಕೈಗೊಳ್ಳಿ. ಯಾವುದೇ ಗ್ರಾಮಗಳಲ್ಲಿ ಹಬ್ಬ, ಜಾತ್ರೆ ನಡೆದರೆ ಗ್ರಾಮದ ವ್ಯಾಪ್ತಿಯ ಪಿಡಿಒಗಳೇ ಹೊಣೆ. ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಎಚ್ಚರವಹಿಸಬೇಕು ಎಂದರು.
ಅಧಿಕಾರಿಗಳಿಗೆ ಸ್ಪಂದಿಸದ ಸಾರ್ವಜನಿಕರು, ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾರ್ಗಸೂಚಿ ಪಾಲಿಸದ ಸಾರ್ವಜನಿಕರಿಗೂ ದಂಡ ವಿಧಿಸಿ. ಆದರೂ ನಿಯಂತ್ರಣಕ್ಕೆ ಬಾರದಿದ್ದರೆ ಎಫ್ಐಆರ್ ದಾಖಲಿಸಿ ಎಂದರು.
ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವೆಂಕಟೇಶ್, ಕೋವಿಡ್ ಪರೀಕ್ಷೆಗೆ ಜನಸಂದಣಿ ಹೆಚ್ಚಾಗುತ್ತಿದ್ದು, ಅಂಬೇಡ್ಕರ್ ಭವನವನ್ನು ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗೆ ಸೂಚಿಸಿದರು.
ಹೋಂ ಐಸೋಲೇಷನ್ ಇರಬೇಕಾದವರಿಗೆ ಅಗತ್ಯ ಸೌಲಭ್ಯ ಇದ್ದರೆ ಮಾತ್ರ ಅವಕಾಶ ನೀಡಿ. ಔಷಧಿ ಮತ್ತು ಅಗತ್ಯ ಸೌಲಭ್ಯ ನೀಡಿ. ಉದ್ಯೋಗ ಅರಸಿ ಬೇರೆ ನಗರಗಳಿಗೆ ಹೋಗಿದ್ದ ತಾಲ್ಲೂಕಿನವರು ಸದ್ಯ ವಾಪಾಸಾಗದಂತೆ ಹೇಳಲು ಸಾಧ್ಯವಿಲ್ಲ. ಜನರು ಗ್ರಾಮಗಳಿಗೆ ಬಂದಾಗ ಕೋವಿಡ್ ಪರೀಕ್ಷೆ ನಡೆಸಿ ಅವರನ್ನು ನಿಗದಿತ ಅವಧಿಯವರೆಗೆ ಐಸೋಲೇಷನ್ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ಸುಧಾಕರ್, ಬಿಇಒ ಜಗದೀಶ್, ಗ್ರಾಮೀಣಾಭಿವೃದ್ಧಿ ಇಲಾಖೆಯ ರವೀಂದ್ರ, ಪ್ರಭಾರ ಟಿಎಚ್ಒ ಡಾ.ಪ್ರಸನ್ನ, ಪಿಎಸ್ಐಗಳಾದ ರವಿಶಂಕರ್, ರಾಮಚಂದ್ರ, ಕೋವಿಡ್ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು ಇದ್ದರು.