ಕೆ.ಆರ್.ಪೇಟೆ: ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತ ಸಮುದಾಯಕ್ಕೆ ಮಾರಕವಾಗುವಂಥ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದೆ. ಇವುಗಳನ್ನು ತಿರಸ್ಕರಿಸಿದರೆ ಮಾತ್ರ ರೈತರ ಉದ್ಧಾರ ಸಾಧ್ಯ ಎಂದು ಚಿಂತಕ ಶಿವಸುಂದರ್ ಹೇಳಿದರು.
ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆಯು ಬುಧವಾರ ಹಮ್ಮಿಕೊಂಡಿದ್ದ ‘ಹೊಸ ಕೃಷಿ ಮಸೂದೆಗಳ ಸಾಧಕ ಭಾಧಕಗಳು ಮತ್ತು ಸಂವಾದ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಪಟ್ಟಿಯಲ್ಲಿರುವ ಕೃಷಿ ಮತ್ತು ಅದರ ಉತ್ಪನ್ನಗಳ ಬಗ್ಗೆ ಕಾನೂನು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೂ ಕೇಂದ್ರ ಸರ್ಕಾರ ರಾಜ್ಯಗಳ ಒಪ್ಪಿಗೆ ಪಡೆಯದೆ, ರೈತರೊಂದಿಗೆ ಸಮಾಲೋಚಿಸದೆ ಕೆಲವು ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆ ಜಾರಿಗೆ ತಂದಿದೆ ಎಂದು ದೂರಿದರು.
ಬಹುರಾಷ್ಟ್ರೀಯ ಕಂಪನಿ ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಗಳಿಗೆ ಅನುಕೂಲವಾಗು ವಂಥ, ರೈತರ ಭೂಮಿಯ ಒಡೆತನ ಮತ್ತು ಕೃಷಿ ಉತ್ಪನ್ನಗಳನ್ನು ಮಾರುವ ಹಕ್ಕನ್ನೇ ಕಸಿದುಕೊಳ್ಳುವ ಈ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯು ವವರೆಗೂ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಎಲ್ಲ ರಾಜಕೀಯ ಪಕ್ಷಗಳೂ ರೈತರನ್ನು ವಂಚಿಸುತ್ತಿವೆ ಎಂದರು.
ವಿಚಾರವಾದಿ ಡಾ.ವಾಸು ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ದೊರೆಯದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದೇಶದ ಆಹಾರ ಭದ್ರತೆಗೆ ಹಾಗೂ ರೈತರ ಸ್ವಾಭಿಮಾನಕ್ಕೆ ಧಕ್ಕೆತರುವ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಹಾಗೂ ಬದ್ಧತೆ ಇಲ್ಲ ಎಂದು ಕೃಷಿ ಕಾಯ್ದೆ ವಿರೋದಿಸುತ್ತಿದ್ದ ಜೆಡಿಎಸ್ ಪಕ್ಷ ಈಗ ಕಾಯ್ದೆಯನ್ನು ಬೆಂಬಲಿಸುತ್ತದೆ. ರೈತರು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರ ಮಾದರಿಯಲ್ಲಿ ಹೋರಾಟ ನಡೆಸಿದರೆ ಮಾತ್ರ ಇಂಥ ಕಾಯ್ದೆ ಜಾರಿಯನ್ನು ತಡೆಗಟ್ಟಬಹುದು ಎಂದರು.
ರಾಜ್ಯ ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಕಾರ್ಯಕ್ರಮ ಉದ್ಘಾಟಿಸಿದರು.
ರೈತನಾಯಕ ಮುದುಗೆರೆ ರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀ ರಾಂ, ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ತಿರಂಗಪ್ಪ, ರೈತಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಂ, ತಾಲ್ಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್, ಮುಖಂಡರಾದ ಲಕ್ಷ್ಮೀಪುರ ಜಗದೀಶ್, ನಾರಾಯಣಸ್ವಾಮಿ, ಪುಟ್ಟೇಗೌಡ, ಬೂಕನಕೆರೆ ನಾಗರಾಜು, ಹೊನ್ನೇನಹಳ್ಳಿ ವೇಣು, ಚೇತನಕುಮಾರ್, ಎ.ಸಿ.ಕಾಂತರಾಜು, ಸಮೀರ್, ಬಿ.ನಾಗೇಂದ್ರಕುಮಾರ್, ಪ್ರದೀಪ, ಬಂಡಿಹೊಳೆ ಜಯರಾಮು, ಸಾಹಿತಿ ಚಾ.ಶಿ.ಜಯಕುಮಾರ್, ಕಾಂತರಾಜು, ಸಮೀರ್, ಮುದ್ದು ಕುಮಾರ್, ತಮ್ಮಯ್ಯ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.