ಶ್ರೀರಂಗಪಟ್ಟಣ: ‘ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಜನರು ನೆರಳಿನಲ್ಲೇ ಇರಬೇಕು’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಸಲಹೆ ನೀಡಿದರು.
ತಾಲ್ಲೂಕಿನ ಚನ್ನಹಳ್ಳಿ ಬಳಿಯ ಹಕ್ಕಿ–ಪಿಕ್ಕಿ ಜನರ ಕಾಲೊನಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಶನಿವಾರ ಬಿಸಿಲಿನ ತಾಪದ ಪರಿಣಾಮಗಳ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತೆಳುವಾದ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಕಾಲ ಕಾಲಕ್ಕೆ ನೀರು ಕುಡಿಯಬೇಕು. ಬಿಸಿನಲ್ಲಿ ಹೊರಗೆ ಹೋಗುವಾಗ ಕನ್ನಡ, ಛತ್ತ್ರಿ, ಟೋಪಿ, ಪಾದರಕ್ಷೆ ಧರಿಸಬೇಕು. ನಿಂಬೆ ಇತರ ಹಣ್ಣಿನ ರಸ ಹಾಗೂ ಮಜ್ಜಿಗೆ ಸೇವಿಸಬೇಕು. ಮೂರ್ಛೆ ಅಥವಾ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ತೆರಳಬೇಕು’ ಎಂದು ತಿಳಿಸಿದರು.
ಬಿಸಿಲಿನ ತಾಪದಿಂದ ಚರ್ಮದ ತುರಿಕೆ, ಚರ್ಮ ಒಣಗುವುದು, ಕೆಂಪಾಗುವುದು, ಅಲರ್ಜಿ, ತೀವ್ರ ಜ್ವರದಂತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್. ಕೃಷ್ಣೇಗೌಡ, ಮುಖಂಡರಾದ ಬಿ. ಕುಮಾರ್, ಹಳ್ಳಿಬಾಬು, ಸುಮಂತ್, ವೆಂಕಟೇಶ್, ರುಕೇಶ್, ಬಾಷಾ, ಗೋಪಾಲಿ ಇದ್ದರು.