ಮಂಡ್ಯ: ತಮಿಳು ಕಾಲೊನಿಯ ನಿವಾಸಿಗಳಿಗೆ ಐ.ಎಚ್.ಎಸ್.ಡಿ.ಪಿ ಯೋಜನೆಯಲ್ಲಿ ಮಂಜೂರಾಗಿ ಅರ್ಧಕ್ಕೆ ಕಾಮಗಾರಿ ನಿಂತಿರುವ ಮನೆಗಳನ್ನು ಪೂರ್ಣಗೊಳಿಸಿ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಹಾಗೂ ತಮಿಳು ಕಾಲೋನಿ ನಿವಾಸಿಗಳು ನಗರಸಭೆ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
ನಗರದ ತಮಿಳು ಕಾಲೊನಿಯ ಗುಡಿಸಲುಗಳಿಗೆ 2008 ರಲ್ಲಿ ಬೆಂಕಿ ಬಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ, ನಗರಸಭೆ, ಪೌರಾಡಳಿತ ನಿರ್ದೇಶನಾಲಯದವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತು. ನಂತರ ಐ.ಎಚ್. ಎಸ್.ಡಿ.ಪಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿಕೊ ಟ್ಟರು ಕಾಮಗಾರಿಯು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ದೂರಿದರು.
ಕೆಲವು ಭೂಗಳ್ಳರು ಇದರ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತೊಂದರೆ ಉಂಟು ಮಾಡಿದರು. ಕೊಳಚೆ ನಿರ್ಮೂಲನಾ ಮಂಡಳಿಯವರು ತಮಿಳುಕಾಲೊನಿಯ ಪರವಾಗಿಲ್ಲದೇ ಭೂಗಳ್ಳರ ಪರವಾಗಿದ್ದಾರೆ. ಜತೆಗೆ ಸ್ಲಂ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಬೇಕು ಎಂದು ಪ್ರಶ್ನಿಸಿ ತಮಿಳು ಕಾಲೊನಿಯವರು ಹೈಕೋರ್ಟ್ ಮೊರೆ ಹೋಗಿದ್ದರೂ ನಗರಸಭೆಯಿಂದ ಕಾಲೊನಿಯಲ್ಲಿ ಸ್ಥಳ ಬಿಟ್ಟುಕೊಡುವಂತೆ ಸಾರ್ವಜನಿಕ ಪ್ರಕಟಣೆ ಹಾಕಿದ್ದಾರೆ. ಬೇರೆಡೆ ಬಹು ಮಹಡಿ ಕಟ್ಟಡ ಕಟ್ಟಿಸುತ್ತೇನೆಂದೂ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
(ಇಂಟಿಗ್ರೇಟೆಡ್ ಹೌಸಿಂಗ್ ಅಂಡ್ ಸ್ಲಂ ಡೆವೆಲೆಪ್ಮೆಂಟ್)ಐಎಚ್ಎಸ್ಡಿಪಿ ಯೋಜನೆ ಮೂಲಕ ತಮಿಳು ಕಾಲೊನಿಯಲ್ಲಿ ಮನೆ ನಿರ್ಮಿಸುತ್ತಿರುವು ದನ್ನು ಪೂರ್ಣ ಮಾಡಬೇಕು. ವಾಂಬೆ ಯೋಜೆನಯಲ್ಲಿ ನಿರ್ಮಿಸಿರುವ ಮನೆಗಳು ಸೇರಿದಂತೆ ತಮಿಳು ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಜಿ.ಎನ್. ನಾಗರಾಜು, ಸಿ. ಕುಮಾರಿ, ಎಂ. ಪುಟ್ಟಮಾದು, ಮುರುವಾಯಿ, ಸೆಲ್ವ ಕುಮಾರ್, ಅಂಬುಜಿ, ಚಂದ್ರಶೇಖರ್, ಹನುಮೇಶ್, ಚಂದ್ರಮ್ಮ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.