ಕೆ.ಆರ್.ಪೇಟೆ: ಗ್ರಾಮ ಪಂಚಾಯಿತಿ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಲು ಶಿಫಾರಸು ಮಾಡಬೇಕೆಂದು ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗೆ ಒತ್ತಾಯಿಸಲು ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಪಟ್ಟಣದಲ್ಲಿ ಬುಧವಾರ ಅಂಚೆಪತ್ರ ಚಳವಳಿ ನಡೆಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಭೆ ಸೇರಿದ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ನೌಕರರು ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಮೋದೂರು ನಾಗರಾಜು ಮತ್ತು ಜಿಲ್ಲಾ ಘಟಕದ ಉಪಾಧ್ಯಕ್ಷ ಮತ್ತಿಘಟ್ಟ ಎಂ.ಕೆ.ಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಹಾಗೂ 4ನೇ ಹಣಕಾಸು ಆಯೋಗದ ಅಧ್ಯಕ್ಷರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಅಂಚೆಡಬ್ಬಕ್ಕೆ ಹಾಕಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಉದ್ದೇಶಕ್ಕಾಗಿ ಪ್ರತ್ಯೇಕ ಅನುದಾನ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ತಾಲ್ಲೂಕಿನಲ್ಲಿ ಬರಗಾಲವಿರುವುದರಿಂದ ಯಾವುದೇ ಕರ ವಸೂಲಿಯಾಗುತ್ತಿಲ್ಲ. ಇದರಿಂದ ಏಳೆಂಟು ತಿಂಗಳಿನಿಂದ ವೇತನವಿಲ್ಲದೆ ಬಡ್ಡಿ ಸಾಲ ಮಾಡಿ ಜೀವನ ನಡೆಸಬೇಕಾದ ದುಸ್ಥಿತಿ ಎದುರಾಗಿದೆ ಹಾಗಾಗಿ ಪಂಚಾಯಿತಿ ನೌಕರರ ವೇತನಕ್ಕೆ ಪ್ರತ್ಯೇಕ ಅನುದಾನ ನೀಡಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕ ಉಪಾಧ್ಯಕ್ಷ ಮತ್ತಿಘಟ್ಟ ಎಂ.ಕೆ.ಕುಮಾರ್, ತಾಲ್ಲೂಕು ಘಟಕದ ಕಾರ್ಯದರ್ಶಿ ನಂಜಯ್ಯ, ಕೃಷ್ಣನಾಯಕ್, ಉಪಾಧ್ಯಕ್ಷ ವೆಂಕಟೇಶಶೆಟ್ಟಿ, ಎಸ್.ಬಿ.ಕೃಷ್ಣಮೂರ್ತಿ, ರಾಮಕೃಷ್ಣಮೂರ್ತಿ, ಚಿಕ್ಕೋಸಹಳ್ಳಿ ಶ್ರೀನಿವಾಸ್, ಹಿರೀಕಳಲೆ ಕೃಷ್ಣೇಗೌಡ, ಹೆಮ್ಮಡಹಳ್ಳಿ ದೇವರಾಜು ಇದ್ದರು.