ಮದ್ದೂರು: ಕೆಮ್ಮಣ್ಣು ನಾಲೆಯ ಉಪ ನಾಲೆ(ನರಿ ನಾಲೆ)ಯ ಸುಧಾರಣೆಗೆ ಆಗ್ರಹಿಸಿ ಸೋಮೇಗೌಡರ ಬೀದಿಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ನಾಲೆಯ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಹಾಗೂ ರೈತರು ನೀರಾವರಿ ನಿಗಮದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು.
ಪಟ್ಟಣದ ಖರಾಬಿ ಬಯಲಿನ ನೂರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಈ ಉಪನಾಲೆಯಲ್ಲಿ ಹೂಳು ತುಂಬಿದೆ. ಮುಳ್ಳುಕಂಟಿಗಳು ಬೆಳದುಕೊಂಡಿವೆ. ಈ ಹಿಂದೆ ವಿಶಾಲವಾಗಿದ್ದ ನಾಲೆ ಈ ಸುತ್ತಮುತ್ತಲಿನ ನಿವಾಸಿಗಳಿಂದ ಒತ್ತುವರಿಗೆ ಒಳಗಾಗಿ ಕಿದಾಗಿದೆ.
ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಮನೆ ನಿರ್ಮಾಣದ ತ್ಯಾಜ್ಯ ಮಣ್ಣನ್ನು ನಾಲೆಗೆ ಸುರಿದಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಆರೋಪಿಸಿದ ನಿವಾಸಿಗಳು ಈ ಕೂಡಲೇ ನಾಲೆಯ ಅಕ್ರಮ ಒತ್ತುವರಿ ತೆರವುಗೊಳಿಸಿಬೇಕು. ಹೂಳು ಎತ್ತಿಸಿ ನಾಲೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಆಗ್ರಹಿಸಿದರು.
ಮುಖಂಡರಾದ ಎಂ. ಯಶವಂತ್, ರಮೇಶ್, ರವೀಶ್, ಬೋರೇಗೌಡ, ರಘುವೀರ್, ಯುವರಾಜ್, ಜಯಮ್ಮ, ಸುಮ, ಭಾರತಿ, ಮಂಗಳಮ್ಮ, ಶೋಭ, ಮಲ್ಲಿಕಾ, ಪದ್ಮ, ಸುಶೀಲಮ್ಮ, ರಾಜಮ್ಮ ಇತರರು ಇದ್ದರು.