ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

Last Updated 15 ಏಪ್ರಿಲ್ 2013, 7:53 IST
ಅಕ್ಷರ ಗಾತ್ರ

ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿಯನ್ನು ಜಿಲ್ಲಾ ಆಡಳಿತದಿಂದ ಭಾನುವಾರ ನಗರದಲ್ಲಿ ಆಚರಿಸಲಾಯಿತು.

ಕಾವೇರಿ ಉದ್ಯಾನದಲ್ಲಿನ ಡಾ. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ. ಎಂ.ಎನ್.ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಜಿ.ಬೊರಸೆ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, `ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ' ಎಂದು ಹೇಳಿದರು.

ಅಂಬೇಡ್ಕರ್ ದೇಶದ ಆಸ್ತಿ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ಜಯಣ್ಣ ಮಾತನಾಡಿ, `ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ' ಎಂದು ಬಣ್ಣಿಸಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ಹೆಪ್ಸಿಬಾರಾಣಿ ಕೊರ‌್ಲಪಾಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ರಾಜಣ್ಣ, ಜಿಲ್ಲಾ ವಾರ್ತಾಧಿಕಾರಿ ಆರ್.ರಾಜು, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಡಾ. ಎಚ್.ಪಿ.ಮಂಜುಳಾ, ನಗರಸಭಾ ಸದಸ್ಯ ಸೋಮಶೇಖರ್ ಕೆರಗೋಡು, ದಸಂಸ ಮುಖಂಡರಾದ ಎಂ.ಬಿ. ಶ್ರೀನಿವಾಸ್, ವೆಂಕಟಗಿರಿಯಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅಂಬೇಡ್ಕರ್ ಜಯಂತಿ ಆಚರಣೆ
ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿಯನ್ನು ಜಿಲ್ಲೆಯ ವಿವಿಧೆಡೆ ಭಾನುವಾರ ಆಚರಿಸಲಾಯಿತು.

ಬಿಜೆಪಿ ಘಟಕ: ನಗರದ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಹೇಮಂತ್‌ಬಾಬು ನೇತೃತ್ವದಲ್ಲಿ ಕಾರ್ಯಕ್ರಮ ಆಚರಿಸಲಾಯಿತು. ಮುಖಂಡರಾದ ಎಸ್.ಎಂ.ರವಿಪ್ರಸಾದ್, ಜವರೇಗೌಡ , ಟಿ.ರಾಮಲಿಂಗೇಗೌಡ, ನಾಗರಾಜು ಇತರರು ಭಾಗವಹಿಸಿದ್ದರು.

ಗಾಮನಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಹಳ್ಳಿ ಶಿಕ್ಷಕ ಪುರುಷೋತ್ತಮ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಹೊನ್ನೇಗೌಡ, ಶಿಕ್ಷಕರಾದ ಭಕ್ತವತ್ಸಲ, ಚಲುವಮೂರ್ತಿ, ಎಂ.ರಾಜು ಹಾಗೂ ಶಿಕ್ಷಕಿಯರಾದ ಮಮತಾ, ಶೀಲಾವತಿ, ಲೀಲಾವತಿ ಹಾಜರಿದ್ದರು.

`ಸಂವಿಧಾನದ ಆಶಯ ಈಡೇರಲಿ'
ಕಿಕ್ಕೇರಿ: ಕೇವಲ ಅಂಬೇಡ್ಕರ್ ಅವರನ್ನು ನೆನೆದು ನಂತರ ಮರೆಯುವ ಬದಲು ಸಂವಿಧಾನದ ತತ್ವಗಳನ್ನು ಪಾಲಿಸಲು ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಮಾದಿಗ ದಂಡೋರ ಯುವ ಸೇನಾ ಜಿಲ್ಲಾ ಘಟಕ ಅಧ್ಯಕ್ಷ ಜಿ.ವಿ.ಹರೀಶ್‌ಕುಮಾರ್ ಸಲಹೆ ನೀಡಿದರು.

ಸಮೀಪದ ಗಂಗೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ದಲಿತ ಸಮುದಾಯ  ಏರ್ಪಡಿಸಿದ್ದ ಅಂಬೇಡ್ಕರ್ ಅವರ 122ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂವಿಧಾನವನ್ನು ಸಮರ್ಪಕವಾಗಿ ಎಲ್ಲರೂ ಪಾಲಿಸಿದರೆ ದೇಶ ಸುಖೀಯಾದೀತು. ದಲಿತ ಜನಾಂಗವನ್ನು ತಾಲ್ಲೂಕಿನಲ್ಲಿ ಹೆಚ್ಚು ಹೊಂದಿರುವ ಈ ಗ್ರಾಮದಲ್ಲಿ ಸಮುದಾಯ ಭವನವಿಲ್ಲ. ಬಡ ವರ್ಗದ ಜನರ ಕೇರಿಗೆ ಚರಂಡಿ ವ್ಯವಸ್ಥೆ ಇಲ್ಲ ಎಂದು ವಿಷಾದಿಸಿದರು.

ಸಮಾಜದ ಹಿರಿಯ ಮುಖಂಡ ಗೋವಿಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಯ್ಯ, ನಾಗರಾಜೇಗೌಡ, ಅಪ್ಪಿ, ಗವಿರಂಗ, ಪಾಂಡು, ಶಿಕ್ಷಕ ಹಣುಮಂತ ಭಜಂತ್ರಿ ಇತರರು ಹಾಜರಿದ್ದರು.

`ಅಂಬೇಡ್ಕರ್ ತತ್ವಾದರ್ಶ ಪಾಲಿಸಿ'
ಕೃಷ್ಣರಾಜಪೇಟೆ: ಶ್ರೇಷ್ಟ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ತಹಶೀಲ್ದಾರ್ ಅಹೋಬಲಯ್ಯ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವ, ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು. ಆಗ ಮಾತ್ರ ಅಂಬೇಡ್ಕರ್‌ರಂತಹ ದಾರ್ಶನಿಕರ ಜನ್ಮ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಪುರಸಭೆ ಸದಸ್ಯ ಪ್ರೇಂಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರಮೌಳಿ, ತಾಲ್ಲೂಕು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖಾಧಿಕಾರಿ ನಂದಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ, ಉಪ ಖಜಾನೆ ಅಧಿಕಾರಿ ರಾಜಯ್ಯ, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮುದುಗೆರೆ ಮಹೇಂದ್ರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಂಬಳ್ಳಿ ಜಯರಾಂ ಇತರರು ಹಾಜರಿದ್ದರು.

ಹಣ್ಣು ಹಂಪಲು ವಿತರಣೆ: ಅಂಬೇಡ್ಕರ್ ಜಯಂತಿ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಮಳವಳ್ಳಿ ವರದಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತ್ಯುತ್ಸವವನ್ನು ತಾಲ್ಲೂಕು ಆಡಳಿತ, ಹಲವು ಸಂಘಟನೆಗಳು ಭಾನುವಾರ ಆಚರಿಸಿದವು.

ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ಎಂ.ಆರ್.ರಾಜೇಶ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು. ಶಿರಸ್ತೆದಾರ್ ಮಹದೇವ್, ಸಿಬ್ಬಂದಿ ಹಾಜರಿದ್ದರು. ಮತ್ತೊಂದೆಡೆ, ಅಂಬೇಡ್ಕರ್ ವೃತ್ತದಲ್ಲಿ ದಲಿತ ಜಾಗೃತಿ ವೇದಿಕೆ ವತಿಯಿಂದ ಅಂಬೇಡ್ಕರ್ ಜಯಂತಿ  ಆಚರಿಸಲಾಯಿತು.

ವೇದಿಕೆ ಅಧ್ಯಕ್ಷ ಡಿ.ಶಿವಕುಮಾರ್, ಮಾರ್ಕಾಲು ನಟರಾಜು, ಸಿದ್ದರಾಜು, ದುಗ್ಗನಹಳ್ಳಿ ನಾಗರಾಜು, ಲಿಂಗದೇವರು, ಜಯರಾಜು, ಆನಂದ್, ಪ್ರಶಾಂತ್ ಕುಮಾರ್, ಡಾ.ಎಂ.ಆರ್.ಪ್ರಸಾದ್, ಸಿದ್ದರಾಮು, ನಾಗಸಿದ್ದಯ್ಯ ಇತರರು ಹಾಜರಿದ್ದರು.

ಜೆಡಿಎಸ್ ಕಚೇರಿ: ಇಲ್ಲಿಯೂ ಸಹ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಮಲ್ಲೇಗೌಡ, ಕೃಷ್ಣ, ಮುರುಳಿ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸದಸ್ಯ ಮಹೇಶ್, ಕಂಬರಾಜು, ಆರ್.ಎನ್.ಸಿದ್ದರಾಜು ಇತರರು ಇದ್ದರು.

ಭಗವಾನ್ ಶಿಕ್ಷಣ ಸಂಸ್ಥೆ: ಅಂಬೇಡ್ಕರ್ 122ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲ ಲಿಂಗಯ್ಯ ಅವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ಮಳವಳ್ಳಿ ವರದಿ: ತಾಲ್ಲೂಕಿನ ಬೆಳಕವಾಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ರಂಗಸ್ವಾಮಿ, ಅಂಬೇಡ್ಕರ್ ಅವರ ಆದರ್ಶ ತತ್ವಗಳು ಯುವಕರಿಗೆ ಮಾದರಿಯಾಗಬೇಕು ಎಂದರು.

ಮುಖ್ಯಭಾಷಣಕಾರರಾಗಿ ಉಪನ್ಯಾಸಕ ಆರ್.ಆರ್.ಮಹೇಶ್ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪಿಅಂಡ್‌ಟಿ ಸಿದ್ದರಾಜು, ಪಿಎಸ್‌ಐ ಮಹದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಭಾಷಿನಿ, ಕಾಂತರಾಜು ಇತರರು ಹಾಜರಿದ್ದರು.

`ಸಮಾನತೆಯ ಸಮಾಜ ನಿರ್ಮಾಣ ಅಗತ್ಯ'
ಶ್ರೀರಂಗಪಟ್ಟಣ: ಸಮಾನತೆಯ ಸಮಾಜ ನಿರ್ಮಾಣ ಆಗದ ಹೊರತು ವರ್ಗ ಮತ್ತು ಕೋಮು ಸಂಘರ್ಷಗಳು ಅಂತ್ಯ ಕಾಣುವುದು ಕಷ್ಟಸಾಧ್ಯ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ವೋದಯ ಕರ್ನಾಟಕ ಪಕ್ಷದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. `ಸರ್ವರಿಗೆ ಸಮಬಾಳು- ಸರ್ವರಿಗೂ ಸಮಪಾಲು' ಪರಿಕಲ್ಪನೆ ಕೇವಲ ಘೋಷಣೆ ಹಾಗೂ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಕಾರ್ಯಗತ ಮಾಡಲು ನಮ್ಮನ್ನಾಳಿದ ಸರ್ಕಾರಗಳು ವಿಫಲವಾಗಿವೆ. ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಜಾತಿಯನ್ನೇ ಬಂಡವಾಳ ಮಾಡಿಕೊಂಡು ಜಾತಿ ಭಾವನೆಯನ್ನು ಮತ್ತಷ್ಟು ಸಾಂದ್ರಗೊಳಿಸುತ್ತಿವೆ ಎಂದು ವಿಷಾದಿಸಿದರು.

ಕೃಷಿಕ ಸಮಾಜದ ನಿರ್ದೇಶಕ ಬಾಲಕೃಷ್ಣ, ಕಿರಂಗೂರು ಮಹದೇವು, ಕೆ.ಶೆಟ್ಟಹಳ್ಳಿ ಯತೀಶ್, ಪಿ.ಕೆಂಪೇಗೌಡ, ಕಾಳೇಗೌಡ ಹಾಜರಿದ್ದರು.

ತಾಲ್ಲೂಕು ಆಡಳಿತ: ತಾಲ್ಲೂಕು ಆಡಳಿತದಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ಎಂ.ಸಿ.ಮಹದೇವು, ಸಮಾಜ ಕಲ್ಯಾಣ ಅಧಿಕಾರಿ ಪಿ.ಎಸ್.ಪ್ರಭಾ, ದಸಂಸ ಮುಖಂಡರಾದ ಗಂಜಾಂ ರವಿಚಂದ್ರ, ಎಂ.ಚಂದ್ರಶೇಖರ್, ಕುಬೇರಪ್ಪ, ದಲಿತ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಸಿ.ಪ್ರಕಾಶ್ ಇತರರು ಹಾಜರಿದ್ದರು.

ಮದ್ದೂರು ವರದಿ:  ಸಮೀಪದ ಯರಗನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ 122ನೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ , ದೀನ ದಲಿತರ ಏಳಿಗೆಗಾಗಿ ತಮ್ಮನ್ನೇ ಮುಡಿಪಿಟ್ಟ ಅಂಬೇಡ್ಕರ್ ಅವರ ಹೋರಾಟ ಮತ್ತು ಆದರ್ಶ ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹದೇವಮ್ಮ ಅಧ್ಯಕ್ಷತೆ ವಹಿಸಿದ್ದರು.  ಮುಖಂಡರಾದ ಯರಗನಹಳ್ಳಿ ಮಹಾಲಿಂಗು, ದ್ಯಾವಯ್ಯ, ಕೃಷ್ಣಮೂರ್ತಿ, ಅಪ್ಪಾಜಿ, ಕೃಷ್ಣ, ಸಂಘದ ಅಧ್ಯಕ್ಷ ರೂಪೇಶ್, ಉಪಾಧ್ಯಕ್ಷ ಜನಾರ್ಧನ್, ಪದಾದಿಕಾರಿಗಳಾಗದ ವಿಲಾಸ್‌ಬಾಬು, ಸಾಗರ್, ನಿತ್ಯಾನಂದ, ಸುದರ್ಶನ್, ವೆಂಕಟೇಶ್, ಅಭಿಷೇಕ್ ಇದ್ದರು.

`ಅಂಬೇಡ್ಕರ್ ಬದುಕು ಅನುಕರಣೀಯ'
ಮದ್ದೂರು:  ಕೊನೆ ಉಸಿರಿನವರೆಗೂ ದೀನ ದಲಿತರ ಏಳಿಗೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಅನುಸರಣೀಯ ಎಂದು ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ಇಲ್ಲಿಯ ತಾಲ್ಲೂಕು ಕಚೇರಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಈ ಮಾದರಿಯನ್ನು ಹಲವು ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ರಾಮಪ್ಪ, ಬಿಇಓ ಕೆ.ಕಾಂತರಾಜು, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ಸಮಾಜ ಕಲ್ಯಾಣಾಧಿಕಾರಿ ನಾಗರಾಜು, ಅಧಿಕಾರಿಗಳಾದ ಜಮೀರ್, ನಾಗೇಂದ್ರ, ಜೈಪ್ರಕಾಶ್, ರಾಮಯ್ಯ, ರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT