ಮೈಸೂರು: ಶ್ರೀರಾಂಪುರ ಬಡಾವಣೆ ಬಳಿ ಇರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಜಾಗದಲ್ಲಿ 250 ನಿವೇಶನಗಳಿದ್ದು, ಅವುಗಳನ್ನು ಹಂತಹಂತವಾಗಿ ಹರಾಜು ಹಾಕಲು ಸಭೆ ನಿರ್ಧರಿಸಿದೆ.
ಮುಡಾ ಅಧ್ಯಕ್ಷ ಎಚ್.ಎನ್.ವಿಜಯ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆ ಈ ನಿರ್ಣಯ ಕೈಗೊಂಡಿದೆ.
ಮುಡಾಕ್ಕೆ ಸೇರಿದ ಈ ಜಾಗ ಹಲವಾರು ವರ್ಷಗಳಿಂದ ಹಾಗೇ ಬಿದ್ದಿತ್ತು. ಇದನ್ನು ಈಗ ಅಭಿವೃದ್ಧಿಪಡಿಸಲಾಗಿದೆ.
ಗೃಹ ನಿರ್ಮಾಣ ಸಹಕಾರ ಸಂಘಗಳ ಬಡಾವಣೆಗಳಿಗೆ ಅನುಮೋದನೆ ನೀಡುವುದಕ್ಕೆ ಸಭೆ ಒಪ್ಪಿಗೆ ನೀಡಿತು. ಸರ್ಕಾರದ ಆದೇಶದಂತೆ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ಸಭೆಯಲ್ಲಿ ಈ ವಿಚಾರದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆದು ಅರ್ಧಕ್ಕೆ ಮೊಟಕುಗೊಂಡಿತ್ತು.
ಸರ್ಕಾರ 2010 ರಲ್ಲಿ ಸುಮಾರು 1,250 ಎಕರೆ ಡಿನೋಟಿಫೈ ಮಾಡಿತ್ತು. ಇದರಲ್ಲಿ ಏಳು ಗೃಹ ನಿರ್ಮಾಣ ಸಂಘಗಳಿಗೆ ಸೇರಿದ 140 ಎಕರೆ ಪ್ರದೇಶವೂ ಒಳಗೊಂಡಿದೆ. ಹಲವು ವರ್ಷಗಳಿಂದ ಈ ಪ್ರಕರಣ ಹಾಗೆಯೇ ಉಳಿದುಕೊಂಡಿತ್ತು.
‘ಎನ್ಒಸಿ ನೀಡುವ ವಿಚಾರವನ್ನು ಸಭೆಯಲ್ಲಿ ಇಡುವ ಅಗತ್ಯವೇ ಇಲ್ಲ. ಆದರೂ, ಆಯುಕ್ತರ ಒಪ್ಪಿಗೆ ಮೇರೆಗೆ ಚರ್ಚೆಗೆ ಕೈಗೆತ್ತಿಕೊಳ್ಳಲಾಯಿತು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು’ ಎಂದು ಸದಸ್ಯರೊಬ್ಬರು ಮಾಹಿತಿ ನೀಡಿದರು.
ಜಾಗ ಖರೀದಿಗೆ ತಕರಾರು: ನರಸಿಂಹ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಮುಡಾದ 9 ಎಕರೆ ಜಾಗದ ಪಕ್ಕದಲ್ಲಿರುವ 31 ಗುಂಟೆ ಖಾಸಗಿ ಜಾಗ ಖರೀದಿಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆ ಚರ್ಚೆ ನಡೆಯಿತು. ಹೊಸ ಯೋಜನೆಗಾಗಿ ಆ ಜಾಗ ಖರೀದಿಸಿ ಅದಕ್ಕೆ ಬದಲಾಗಿ ಖಾಸಗಿಯವರಿಗೆ ಬೇರೆ ಜಾಗ ನೀಡುವಂತೆ ಕೆಲ ಸದಸ್ಯರು ಸಲಹೆ ನೀಡಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಯಾವುದಾದರೂ ಸರ್ಕಾರಿ ಯೋಜನೆ ಮಂಜೂರಾದ ಮೇಲೆ ನೋಡೋಣ ಎಂದರು.
ಈ ಹಿಂದೆ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು ಮಂಜೂರಾಗಿದ್ದ ಕಾರಣ ಆರೂವರೆ ಎಕರೆಯನ್ನು ನೀಡಲು ಮುಡಾ ಒಪ್ಪಿಗೆ ನೀಡಲಾಗಿತ್ತು. ಆದರೆ, ಕೊನೆಯಲ್ಲಿ ಮಂಜೂರು ರದ್ದಾ ಗಿತ್ತು. ಹೀಗಾಗಿ, ಮುಡಾ ಬಳಿಯೇ ಈ ಜಾಗವಿದೆ.
ವಿಶೇಷ ಸಭೆಗೆ ನಿರ್ಧಾರ: ಈಗಾ ಗಲೇ ಹಂಚಿಕೆ ಮಾಡಿರುವ ಸಿಎ ನಿವೇಶನಗಳನ್ನು ಅಭಿವೃದ್ಧಿಪಡಿಸದಿ ರುವುದು, ಹಣ ನೀಡದಿರುವುದು, ದುರುಪಯೋಗವಾಗಿರುವ ಸಂಬಂಧ ವಿಸ್ತೃತ ಚರ್ಚೆ ನಡೆಸಲು ವಿಶೇಷ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಖಾಸಗಿ ಬಡಾವಣೆ ನಿರ್ಮಿಸಿರುವವರಿಂದ ಸಂಗ್ರಹಿಸುವ ನೀರಿನ ಸೆಸ್ ಹೆಚ್ಚಿಸಲು ಸಭೆ ನಿರ್ಧರಿಸಿದೆ. ಕಾಫಿ ಬೋರ್ಡ್ ಕಚೇರಿ ಬಳಿ ಇರುವ ಕುದುರೆಮಾಳ ಹತ್ತಿರ ಜಾಗವನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ನೀಡಲು ತೀರ್ಮಾನಿಸಿದೆ.
ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಶಾಸಕರಾದ ತನ್ವೀರ್ ಸೇಠ್, ಎಸ್.ಎ ರಾಮದಾಸ್, ಎಲ್.ನಾಗೇಂದ್ರ, ಡಿ.ಹರ್ಷವರ್ಧನ್, ಪಾಲಿಕೆ ಪ್ರತಿನಿಧಿ ಎಸ್ಬಿಎಂ ಮಂಜು, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಸೂಪರಿಂಟೆಂಡೆಂಟ್ ಎಂಜಿನಿಯರ್ ಸುರೇಶ್ ಬಾಬು, ನಗರ ಯೋಜನೆ ಸದಸ್ಯ ಬಿ.ಎನ್.ಗಿರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.