ಮೈಸೂರು/ವರುಣಾ: ಕೋವಿಡ್ ಸೋಂಕಿತರಿಬ್ಬರು ಭಯದಿಂದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಉದಯಗಿರಿಯ ನಿವಾಸಿ ದೇವರಾಜ್ ಮೇ 7ರಂದು ಕೋವಿಡ್ ಪೀಡಿತರಾಗಿದ್ದರು. ಚಿಕಿತ್ಸೆಗಾಗಿ ಟ್ರಾಮಾ ಕೇರ್ ಸೆಂಟರ್ನಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಭಯದಿಂದ ಆಸ್ಪತ್ರೆಯ ಶೌಚಾಲಯದ ಕಿಟಕಿಗೆ, ಆಮ್ಲಜನಕ ಪಡೆಯುತ್ತಿದ್ದ ಪೈಪ್ನಿಂದಲೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸಿದ್ದಾರ್ಥ ನಗರದ ಶಿವನಂಜೇಗೌಡ (64) ಮೇ 6ರಂದು ಕೋವಿಡ್ ಪೀಡಿತರಾಗಿದ್ದು, ವರುಣಾ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆಯೇ ಮನೆಯಿಂದ ಸ್ಕೂಟಿಯಲ್ಲಿ ಹೊರಗೆ ತೆರಳಿದ್ದ ಶಿವನಂಜೇಗೌಡ ವರುಣಾ ಕೆರೆಗೆ ಹಾರಿದ್ದಾರೆ. ಮಧ್ಯಾಹ್ನದ ವೇಳೆಗೆ ಮೃತದೇಹ ಪತ್ತೆಯಾಗಿದೆ ಎಂದು ವರುಣಾ ಪಿಎಸ್ಐ ಆರ್.ಲಕ್ಷ್ಮೀ ತಿಳಿಸಿದರು.
ಶಿವನಂಜೇಗೌಡ ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಗೊರವನಹಳ್ಳಿ ನಿವಾಸಿ. ಕೋವಿಡ್ ಪೀಡಿತರಾಗಿದ್ದ ಇವರು, ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇವರ ಮನೆಯಲ್ಲಿರುವ ಇನ್ನುಳಿದ ಮೂವರು ಕೋವಿಡ್ ಪೀಡಿತರಾಗಿದ್ದಾರೆ ಎಂಬುದು ತಿಳಿದು ಬಂದಿದೆ.