ಎಚ್.ಡಿ.ಕೋಟೆ: ಜಿಂಕೆ ಮಾಂಸ ಸಂಗ್ರಹಿಸಿ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಪಟ್ಟಣದಲ್ಲಿ ಮೈಸೂರಿನ ಅರಣ್ಯ ವೀಕ್ಷಣಾ ದಳದವರು ಬುಧವಾರ ಬಂಧಿಸಿದ್ದಾರೆ.
ಪಟ್ಟಣದ ನ್ಯಾಯಾಲಯದ ಪಕ್ಕದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಸಂತೋಷ ಎಂಬ ವ್ಯಕ್ತಿಯನ್ನು ಅರಣ್ಯ ಇಲಾಖೆಯವರು ಮಾಲು ಸಮೇತ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಮೇಟಿಕುಪ್ಪೆ ವಲಯ ಅರಣ್ಯ ಅಧಿಕಾರಿ ನೇತೃತ್ವದಲ್ಲಿ ದಾಳಿ ಮಾಡಿದ ಅರಣ್ಯ ವೀಕ್ಷಣಾ ದಳದವರು ಬಂಧಿತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದು, ನಾಗನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ನನಗೆ ಜಿಂಕೆ ಮಾಂಸ ತಂದು ಕೊಟ್ಟಿರುವುದಾಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ಎಷ್ಟು ಜನರು ಸೇರಿ ಜಿಂಕೆಯನ್ನು ಕೊಂದು ಅದರ ಮಾಂಸ ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ.