ಮೈಸೂರು: ಉದ್ಯೋಗವನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಒಳಚರಂಡಿ ಕಾರ್ಮಿಕರು ಇಲ್ಲಿನ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ಆರಂಭಿಸಿದರು.
ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಒಳಚರಂಡಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿರುವ ಅವರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
‘ಪೌರಕಾರ್ಮಿಕರಿಗೆ ಕಾಯಂ ಆಗುವಾಗ ನಮಗೂ ಕಾಯಂ ಆಗುತ್ತದೆ ಎಂದು ಅಂದುಕೊಂಡಿದ್ದೆವು. ಆದರೆ, ನಮಗೆ ಕಾಯಂ ಮಾಡದೇ ಅನ್ಯಾಯ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಪಳನಿ ದೂರಿದರು.
ಪೌರಕಾರ್ಮಿಕರು ಹಾಗೂ ಒಳಚರಂಡಿ ಕೆಲಸ ಮಾಡುವವರಿಗೂ ವೇತನದಲ್ಲಿ ವ್ಯತ್ಯಾಸ ಇದೆ. ಬೆಳಗಿನ ಉಪಾಹಾರದ ಭತ್ಯೆಯನ್ನೂ ನೀಡುತ್ತಿಲ್ಲ. ಒಳಚರಂಡಿ ಕೆಲಸ ಮಾಡುವ ನಮ್ಮನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಳಚರಂಡಿ ವಿಭಾಗದಲ್ಲಿ 231 ಖಾಲಿ ಹುದ್ದೆಗಳು ಇವೆ. ಈಗ ಕೆಲಸ ಮಾಡುತ್ತಿರುವ ನಮ್ಮನ್ನು ಈ ಹುದ್ದೆಗೆ ನೇಮಕ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಒಳಚರಂಡಿ ಕಾರ್ಮಿಕರ ಜೀವಿತಾವಧಿ ಕೇವಲ 50 ವರ್ಷಗಳು ಮಾತ್ರ. ಯಾರು ಬೇಕಾದರೂ ಬಂದು ಸಮೀಕ್ಷೆ ನಡೆಸಿ, ಬಹುತೇಕ ಎಲ್ಲರೂ ಕ್ಯಾನ್ಸರ್, ಚರ್ಮಸಂಬಂಧಿ ರೋಗಗಳು ಹಾಗೂ ಇತರ ಮಾರಕ ರೋಗಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಇಂತಹ ಕಡುಕಷ್ಟದಲ್ಲಿರುವ ನಮ್ಮನ್ನು ಕಾಯಂಗೊಳಿಸಿ ಎಂದು ಮನವಿ ಮಾಡಿದರು.
ಉನ್ನತ ಸಮಿತಿ ಅಧ್ಯಕ್ಷ ಮಾರ, ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಸ್ತುವಾರಿ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಗಣೇಶ್ ಇದ್ದರು.