ಕೆ.ಆರ್.ನಗರ: ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ದುರ್ಗಾ ಪರಮೇಶ್ವರಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಜಯಘೋಷ ಮೊಳಗಿಸಿದ ಭಕ್ತ ಸಮೂಹ ದೇವಸ್ಥಾನದ ಸುತ್ತಲೂ ತೇರು ಎಳೆದು ಧನ್ಯರಾದರು.
ತಾಲ್ಲೂಕಿನ ಮಂಚನಹಳ್ಳಿ, ಬಡಕನಕೊಪ್ಪಲು, ಸನ್ಯಾಸಿಪುರ, ತಿಪ್ಪೂರು, ಅಡಗೂರು, ಹಂಪಾಪುರ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮದ ನೂರಾರು ಯುವಕ-ಯುವತಿಯರು, ನವ ದಂಪತಿ, ಮಹಿಳೆಯರು, ಮಕ್ಕಳು, ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ರಥದ ಮೇಲೆ ಹಣ್ಣು ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು. ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ದೇಗುಲದ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಕೆಲ ಭಕ್ತರು ಪ್ರಸಾದವಾಗಿ ಪಾನಕ–ಮಜ್ಜಿಗೆ ವಿತರಿಸಿದರು.
ದೇವಸ್ಥಾನದ ಒಳ ಮತ್ತು ಹೊರ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ, ಬಾಗಿಲುಗಳಿಗೆ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ತೇರಿಗೆ ಬಣ್ಣ ಬಣ್ಣದ ಬಟ್ಟೆ, ವಿವಿಧ ಹೂವು, ಬಾಳೆ ದಿಂಡಿನಿಂದ ಅಲಂಕರಿಸಲಾಗಿತ್ತು. ಸಿಹಿ ತಿಂಡಿ–ತಿನಿಸು, ಆಟಿಕೆಗಳ ಅಂಗಡಿಗಳಿಗೆ ಮುಗಿ ಬಿದ್ದ ಮಹಿಳೆಯರು, ಮಕ್ಕಳು ತಮ್ಮ ಇಷ್ಟದ ವಸ್ತು ಖರೀದಿಸಿದ ಚಿತ್ರಣ ಸಹಜವಾಗಿತ್ತು.