ಹುಣಸೂರು: ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಲಿಕಲ್ಲು ಸಹಿತ ಭಾರಿ ಮಳೆ ಉಂಟಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಗ್ರಾಮದ ಊರುಕುಪ್ಪೆ ಬಡಾವಣೆ ಭಾಗದಲ್ಲಿ 15 ವಿದ್ಯುತ್ ಕಂಬಗಳು ಸೇರಿದಂತೆ 2 ಟ್ರ್ಯಾನ್ಸ್ ಫಾರ್ಮರ್ ನೆಲಕ್ಕುರುಳಿದೆ. ಬಿರುಸಿನ ಗಾಳಿಗೆ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ನೆಲಕ್ಕೆ ಉರುಳಿದೆ.
ಅಲ್ಲದೇ ಬಡಾವಣೆಯ ಅನೇಕ ಮನೆಗಳ ಚಾವಣೆ ಹಾರಿ ಹೋಗಿ, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೈಸ್ಕೂಲ್ ಬಡಾವಣೆಯ ಮೆಣಸಮ್ಮ ಅವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಠಿಸಿದೆ.
‘ಬಡಾವಣೆಯಲ್ಲಿ ವಿದ್ಯುತ್ ಕಂಬ, ಹುಲಿನ ಮೆದೆ ಮೇಲೆ ವಿದ್ಯುತ್ ಕಂಬವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ನಿವಾಸಿ ಸ್ವಾಮಿಗೌಡ ತಿಳಿಸಿದ್ದಾರೆ.
ಆಲಿಕಲ್ಲು: ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆಗೆ ರೈತರು ಬೆಳೆದಿದ್ದ ಬಹುಪಾಲು ತಂಬಾಕು ಸಸಿಗಳು ನಾಶವಾಗಿವೆ. ‘ಮಳೆ ಎದುರು ನೋಡುತ್ತಿದ್ದ ರೈತರು ತಂಬಾಕು ಸಸಿ ನಾಟಿ ಮಾಡಲು ಸಿದ್ದರಾಗಿದ್ದರು. ಆದರೆ, ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಟ್ರೇ ನಲ್ಲಿ ಇದ್ದ ಸಸಿಗಳು ನಾಶವಾಗಿವೆ’ ಎಂದು ರೈತ ರಾಮೇಗೌಡ ಅಳಲು ತೋಡಿಕೊಂಡಿದ್ದಾರೆ.
‘ಗ್ರಾಮದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಬೆಳೆದಿದ್ದ ಒಂದು ಸಾವಿರ ಮರಗಳು ಗಾಳಿಗೆ ಸಿಲುಕಿ ನೆಲ ಕಚ್ಚಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಗಿದೆ’ ಎಂದು ಸ್ಥಳಿಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಹಾನಿ ಉಂಟಾಗಿದ್ದ ಸ್ಥಳಕ್ಕೆ ತಾಲ್ಲೂಕು ಕಂದಾಯ ಅಧಿಕಾರಿ ಮತ್ತು ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶನಿವಾರದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು.