ಮೈಸೂರು: ಕೇರಳದಲ್ಲಿ ‘ನಿಫಾ’ ಸೋಂಕು ಮರುಕಳಿಸಿದ ಬೆನ್ನಲ್ಲೇ ಮೈಸೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
‘ನಿಫಾ’ ಸೋಂಕಿನ ಲಕ್ಷಣ ಹೋಲುವ ವ್ಯಕ್ತಿ ಚಿಕಿತ್ಸೆಗೆ ದಾಖಲಾದರೆ ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಿದೆ.
ಕೇರಳಕ್ಕೆ ತೆರಳುವ ಪ್ರವಾಸಿಗರಿಗೆ ‘ಮಾಸ್ಕ್’ ಧರಿಸಿ ಹೋಗುವಂತೆ ಸಲಹೆ ನೀಡಿದೆ. ಜ್ವರ, ಶೀತ, ಕೆಮ್ಮು, ನೆಗಡಿಯಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಕೇರಳದಲ್ಲಿ ‘ನಿಫಾ’ ಸೋಂಕು ಹರಡಿರುವ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವೊಂದನ್ನು ಕಳಿಸಿ ಪರಿಶೀಲನೆ ನಡೆಸಲೂ ಚಿಂತನೆ ನಡೆಸಿದೆ.
‘ನಿಫಾ ಸೋಂಕಿನ ಕುರಿತು ಸಾರ್ವಜನಿಕರು ಅನಗತ್ಯವಾಗಿ ವಿಚಲಿತರಾಗಬಾರದು. ಯಾವುದೇ ಬಗೆಯ ಜ್ವರವಿದ್ದರೂ ಸರಿ ಕೂಡಲೇ ವೈದ್ಯರ ಬಳಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈಗಾಗಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನಾಲಯವು ರಾಜ್ಯಕ್ಕೆ ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಿದೆ. ರೋಗ ಹರಡುವ ರೀತಿ ಮತ್ತು ರೋಗದ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಬೇಕು. ‘ನಿಫಾ’ ಕುರಿತು ಕಡ್ಡಾಯವಾಗಿ ನಿತ್ಯ ವರದಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಕೂಡ ಸೂಚನೆ ನೀಡಿದೆ.