ತಿ.ನರಸೀಪುರ: ಕಳಪೆ ಭತ್ತ ಬಿತ್ತನೆ ಬೀಜ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರಿಯೂರು ಗ್ರಾಮದ ಜಮೀನುಗಳಿಗೆ ಮಂಡ್ಯ ವಿ.ಸಿ ಫಾರಂನ ಕೃಷಿ ವಿಜ್ಞಾನಿಗಳು ಹಾಗೂ ತಾಲ್ಲೂಕು ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಕಾಲೇಜು ರಸ್ತೆಯ ಅಂಗಡಿಯೊಂದರಲ್ಲಿ ಗ್ರಾಮದ ಕೆಲ ರೈತರು ‘ಜಯಶ್ರೀ’ ಎಂಬ ಭತ್ತದ ತಳಿ ಖರೀದಿಸಿ ನಾಟಿ ಮಾಡಿದ್ದರು. ಆದರೆ ನಿಗದಿತ ಅವಧಿಗೂ ಮುನ್ನವೇ ಭತ್ತದ ತೆನೆ ಒಡೆದಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ ಎಂದು ಆರೋಪಿಸಿ ರೈತರು ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಗುರುವಾರ ಕೃಷಿ ವಿಜ್ಞಾನಿಗಳಾದ ಡಾ. ಶಿವಕುಮಾರ್, ದಿನೇಶ್, ಉಪನಿರ್ದೇಶಕ ಸೋಮಶೇಖರ್, ತಜ್ಞರಾದ ಪುಷ್ಪಲತಾ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಭೇಟಿ ನೀಡಿ ಭತ್ತದ ಬೆಳೆಯನ್ನು ಪರಿಶೀಲಿಸಿದರು.
‘ಇದು ಅಲ್ಪಾವಧಿ ತಳಿ ಆಗಿರುವುದರಿಂದ ಬೇಗ ತೆನೆ ಬಂದಿದೆ. ಈ ಬಗ್ಗೆ ಶೀಘ್ರ ವರದಿ ನೀಡಲಾಗುವುದು’ ಎಂದು ಹೇಳಿದ ವಿಜ್ಞಾನಿಗಳು, ರೈತರಿಗೆ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ.
ತಾಂತ್ರಿಕ ಅಧಿಕಾರಿ ರಾಘವೇಂದ್ರ, ಮೂಗೂರು ಕೃಷಿ ಕೇಂದ್ರದ ಪ್ರಭಾರ ಅಧಿಕಾರಿ ವಿಜಯಲಕ್ಷ್ಮೀ, ರೈತರಾದ ಸೋಮಣ್ಣ, ಕುಮಾರ್, ನವೀನ್ ಸೇರಿದಂತೆ ಮತ್ತಿತರರು ಹಾಜರಿದ್ದರು.