ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ

ಹಲವೆಡೆ ಬೆಳೆಗಳ ನಾಶ, ಕೋಯ್ಲಿಗೆ ತೊಂದರೆ
Last Updated 7 ಜನವರಿ 2021, 3:47 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿಯೂ ಬುಧವಾರ ಹಲವೆಡೆ ಅಕಾಲಿಕವಾಗಿ ಮಳೆಯಾಗಿದೆ. ಸಂಜೆ ಆರಂಭವಾದ ಮಳೆ ಬಹುತೇಕ ಕಡೆ ಬಿರುಸಿನಿಂದ ಸುರಿದಿದೆ.

ಬಿಸಿಲಿನಿಂದ ಬತ್ತಿ ಹೋಗಿದ್ದ, ಕೆರೆ, ಹಳ್ಳಕೊಳ್ಳಗಳಿಗೆ ನೀರು ಹರಿದು ಬಂದಿದೆ. ತೋಟಗಾರಿಕಾ ಬೆಳೆಗಳಿಗೆ ಮಳೆಯು ಪ್ರಯೋಜನಕಾರಿಯಾಗಿ ಪರಿಣಮಿಸಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಭೀತಿ ದೂರವಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ವಿವಿಧೆಡೆ ಕಟಾವಿಗೆ ಬಂದ ಬೆಳೆಯು ಮಳೆಗೆ ಸಿಲುಕಿ ಹಾಳಾಗಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

‘ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಕಟಾವು ಮಾಡಿದ್ದಾರೆ. ಇವುಗಳ ಒಕ್ಕಣೆ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಮಳೆ ಬಂದಿದ್ದರಿಂದ ಒಕ್ಕಣೆ ಕಾರ್ಯಕ್ಕೆ ತೊಂದರೆಯಾಗಿದೆ’ ಎಂದು ತಾಲ್ಲೂಕಿನ ರೈತ ಶಿವಪ್ಪ ತಿಳಿಸಿದರು.

ಜಯಪುರದಲ್ಲಿ ಬೆಳೆಗಳಿಗೆ ಹಾನಿ
ಜಯಪುರ ಹೋಬಳಿಯಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ರೈತರು ಒಕ್ಕಣೆ ಮಾಡುತ್ತಿದ್ದ ರಾಗಿ, ಜೋಳ, ಹುರುಳಿ ಬೆಳೆಗಳು ನಾಶವಾಗಿವೆ. ಒಕ್ಕಣೆ ಮಾಡದೇ ಕಟಾವಿನ ಹಂತದಲ್ಲಿದ್ದ ಬೆಳೆಗಳಿಗೂ ಮಳೆ ಹಾನಿ ಮಾಡಿದೆ. ಕೈಗೆ ಬಂದ ಬೆಳೆಯು ಮಳೆ ನೀರಿನ ಪಾಲಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಜಯಪುರ ಹೋಬಳಿಯ ಮಾವಿನಹಳ್ಳಿ, ಜಯಪುರ, ಗುಜ್ಜೆಗೌಡನಪುರ, ಮದ್ದೂರು, ಹಾರೋಹಳ್ಳಿ, ದೂರ, ಮಾರ್ಬಳ್ಳಿ, ಬೀರಿಹುಂಡಿ, ಕಡಕೋಳ, ಉದ್ಬೂರು, ಧನಗಳ್ಳಿ, ಸಾಲುಂಡಿ, ಗೋಪಾಲಪುರ ಸೇರಿದಂತೆ ಹಲವು ಕಡೆ ಸಂಜೆ ಶುರುವಾದ ಮಳೆಯು ಒಂದು ಗಂಟೆಗಿಂತಲೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದಿದೆ. ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿದೆ.

‘ವರ್ಷವಿಡಿ ಬೆಳೆದು ಮೆದೆ ಹಾಕಿ ಒಕ್ಕಣೆ ಮಾಡಲು ಶುರು ಮಾಡಿದಾಗಲೇ ಮಳೆ ಬಂದಿದೆ. ಇದರಿಂದ ಸಾಕಷ್ಟು ಹಾನಿಯಾಯಿತು’ ಎಂದು ಜಯಪುರ ಗ್ರಾಮದ ರೈತ ಸಣ್ಣಪ್ಪ ತಿಳಿಸಿದರು.

‘ಹೋಬಳಿಯಾದ್ಯಂತ ರೈತರ ಬೆಳೆಗಳು ಮಳೆಯಿಂದ ಹಾನಿ ಸಂಭವಿಸಿ ಹಾಳಾಗುತ್ತಿವೆ. ಹಾನಿಯಾಗಿರುವ ರೈತರ ಬೆಳೆಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಜಯಪುರ ಹೋಬಳಿ ನಾಡಕಚೇರಿಯ ಉಪತಹಶೀಲ್ದಾರ್ ಕೆ.ಎಸ್. ಕುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT