ಪ್ರಕರಣದ ವಿವರ: ಸಿದ್ದಪ್ಪಾಜಿ ಅವರ ಚಿಕ್ಕಪ್ಪ ಪುಟ್ಟಸ್ವಾಮಿಚಾರಿ ಪುತ್ರಿ ಕವಿತಾ ಕಿವಿ ಕೇಳದ, ಮಾತು ಬಾರದ ಯುವತಿ. ಹುಣಸೂರು ತಾಲ್ಲೂಕಿನ ಗದ್ದಿಗೆ ಸಮೀಪದ ಗ್ರಾಮವೊಂದರಲ್ಲಿ ತಮ್ಮ ತಂದೆ ಜತೆ ವಾಸವಿದ್ದರು. ಎರಡು ದಿನಗಳ ಹಿಂದೆ ಸಿದ್ದಪ್ಪಾಜಿ ಮನೆಗೆ ಬಂದಿದ್ದರು.
ತಲಕಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸಿದ್ದಪ್ಪಾಜಿ ಪುತ್ರಿ ಅನು ಬುಧವಾರ ಶಾಲೆಯಿಂದ ಬಂದ ಮೇಲೆ ಬಟ್ಟೆ ವಿಚಾರಕ್ಕೆ ಕವಿತಾ ಜತೆ ಜಗಳವಾಡಿಕೊಂಡಿದ್ದಾಳೆ. ಇದರಿಂದ ಬೇಸರಗೊಂಡ ಅನು ಸಂಜೆ 5.30ರ ವೇಳೆಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ದೇಹವನ್ನು ನೇಣಿನ ಕುಣಿಕೆಯಿಂದ ಇಳಿಸಿ ಮನೆಯ ಮುಂದೆ ಕುಟುಂಬಸ್ಥರು ರೋಧಿಸುತ್ತಿದ್ದರು. ಇದನ್ನು ಕಂಡು ಆಘಾತಕ್ಕೆ ಒಳಗಾದ ಕವಿತಾ ರಾತ್ರಿ 9 ಗಂಟೆ ವೇಳೆಗೆ ಪಕ್ಕದಲ್ಲೇ ಇದ್ದ ಹುಲ್ಲಿನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಗುರುವಾರ ಗ್ರಾಮದಲ್ಲಿ ಇಬ್ಬರ ಅಂತ್ಯ ಸಂಸ್ಕಾರ ನೆರವೇರಿತು. ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.