ಮೈಸೂರು: ‘ಪ್ರವಾಹವಿದೆ ಎಂದು ಯಾರಾದರೂ ಮೂರೊತ್ತು ಊಟ ಮಾಡುವುದನ್ನು ಬಿಟ್ಟಿದ್ದಾರಾ? ಹಸಿದು ಕೊಂಡಿದ್ದಾರಾ?’ ಎಂದು ಅನರ್ಹಗೊಂಡಿರುವ ಶಾಸಕ ಅಡಗೂರು ಎಚ್.ವಿಶ್ವನಾಥ್ ಭಾನುವಾರ ಇಲ್ಲಿ ಪ್ರತಿಕ್ರಿಯಿಸಿದರು.
ಪ್ರವಾಹ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ದೂರಿನಿಂದ ಜನರ ಗಮನ ಬೇರೆಡೆ ಸೆಳೆಯಲು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆಯಲ್ಲ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಳ್ಳುವುದು ಏಕೆ? ಎರಡೂ ಬೇರೆ ಬೇರೆ ವಿಷಯ. ಒಂದಕ್ಕೊಂದು ಸಂಬಂಧವೇ ಇಲ್ಲ. ಫೋನ್ ಕದ್ದಾಲಿಕೆಯೇ ಬೇರೆ. ಪ್ರವಾಹವೇ ಬೇರೆ’ ಎಂದು ಹೇಳಿದರು.
‘ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಒಪ್ಪಿಸಿ ಎಂಬುದು ಹಲವರ ಒಕ್ಕೊರಲ ಒತ್ತಾಯವಾಗಿತ್ತು’ ಎಂದೂ ಅವರು ಹೇಳಿದರು.