ಮೈಸೂರು: ‘ತಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿಯೇ ಇಲ್ಲ. ಹೀಗಿರುವಾಗ, ಪಶ್ಚಾತ್ತಾಪದ ಪ್ರಶ್ನೆ ಎಲ್ಲಿಂದ ಬರುತ್ತದೆ?’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೇಳಿದರು.
ಧರ್ಮದ ವಿಷಯದಲ್ಲಿ ಅಡ್ಡಬರಲ್ಲ, ಹಿಂದೆ ನಡೆದಿದ್ದಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿರುವುದಾಗಿ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆ ಕುರಿತು ಇಲ್ಲಿ ಶನಿವಾರ ಪ್ರತಿಕ್ರಿಯಿಸಿದರು.
‘ಧರ್ಮ ಒಡೆದೆ ಎಂದು ಸಿದ್ದರಾಮಯ್ಯ ಎಂದಿಗೂ, ಎಲ್ಲೂ ಹೇಳಿಲ್ಲ. ಪಶ್ಚಾತ್ತಾಪದ ಬಗ್ಗೆ ನನ್ನ ಮುಂದೆಯೂ ಪ್ರಸ್ತಾಪಿಸಿಲ್ಲ’ ಎಂದರು.
‘ಸಿದ್ದರಾಮಯ್ಯ ಅವರಿಗೆ ಭದ್ರತೆ (ಬೆಂಗಾವಲು) ಹೆಚ್ಚಿಸಿರುವುದು ಸಮಾಧಾನ ತಂದಿದೆ. ಹಿಂದುತ್ವವಾದಿ ಸಂಘಟನೆಗಳವರು ಹಿಂಸಾಚಾರ ನಡೆಸಿ ತಂದೆ ಮೇಲೆ ಹಲ್ಲೆ ಮಾಡುವ ಆತಂಕ ನನಗಿತ್ತು. ಬಿಜೆಪಿಯವರು ಹತಾಶರಾಗಿ ಈ ರೀತಿಯ ಕೃತ್ಯ ಮಾಡುತ್ತಾರೆ. ಆಡಳಿತ ಯಂತ್ರ ವಿಫಲವಾದಾಗ ಆ ವಿಚಾರ ಮರೆ ಮಾಚಲು ಸಣ್ಣತನಕ್ಕೆ ಬಿಜೆಪಿ ಕೈ ಹಾಕುತ್ತದೆ’ ಎಂದು ದೂರಿದರು.