ಮೈಸೂರು: ಕರ್ನಾಟಕಕ್ಕೆ ಎನ್ಡಿಆರ್ಎಫ್ ನಿಯಮಾವಳಿಯಂತೆ ಬರಬೇಕಾದ ಅಷ್ಟೂ ಬರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೊಡಿಸುತ್ತೇವೆ. ಈ ವಿಚಾರದಲ್ಲಿ ರೈತರ ದಾರಿ ತಪ್ಪಿಸಬೇಡಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಕೇಂದ್ರದಿಂದ ಈಗಾಗಲೇ ರಾಜ್ಯಕ್ಕೆ ಅಧಿಕಾರಿಗಳನ್ನು ಕಳುಹಿಸಿ ಬರ ಪರಿಸ್ಥಿತಿ ಅವಲೋಕಿಸಿದ್ದೇವೆ. ಪರಿಹಾರದ ವಿಚಾರದಲ್ಲಿ ಕೇಂದ್ರ ಉದಾರವಾಗಿದೆ. ಸರ್ಕಾರ ಸರಿಯಾದ ಮಾರ್ಗದಲ್ಲಿ ವರದಿ ಸಲ್ಲಿಸಿದಲ್ಲಿ ಶೇ 100ರಷ್ಟು ಪರಿಹಾರ ಬಿಡುಗಡೆ ಮಾಡುತ್ತೇವೆ’ ಎಂದರು.
‘ ಬರ ಬರಲಿದೆ ಎಂದು ಕೇಂದ್ರವು ಜೂನ್ ತಿಂಗಳಲ್ಲೇ ಎಚ್ಚರಿಸಿದ್ದೆವು. ರಾಜ್ಯವು ಅದನ್ನು ಎದುರಿಸಲು ಆಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಬೇಕಾದಷ್ಟು ಅನುದಾನ ಹೊಂದಿಸಿಕೊಳ್ಳಬೇಕಿತ್ತು. ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದೇ ಕೇಂದ್ರವನ್ನು ದೂಷಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಅಗತ್ಯ ಇರುವಷ್ಟು ಪ್ರಮಾಣದ ಉತ್ಪಾದನೆ ಮತ್ತು ಪೂರೈಕೆ ಇದೆ ಎಂದರು.