ಮೈಸೂರು: ‘ಅಂತರ್ಜಾಲ ತಾಣಗಳು, ಫೇಸ್ಬುಕ್, ವೆಬ್ಸೈಟ್ಗಳನ್ನು ನಂಬದೆ ಮಾಹಿತಿಗಾಗಿ ಪುಸ್ತಕ ಓದಿ. ಗ್ರಂಥಗಳನ್ನು ಓದಿ ಗ್ರಹಿಸಿಕೊಳ್ಳಿ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಗುರುವಾರ ಇಲ್ಲಿ ಸಲಹೆ ನೀಡಿದರು.
ಜೆ.ಪುಟ್ಟಸ್ವಾಮಿ ಅವರ ‘ಸುತ್ತಮುತ್ತ’ (ಆಯ್ದ ಲೇಖನಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈಚೆಗಿನ ದಿನಗಳಲ್ಲಿ ಟಿ.ವಿ. ವೀಕ್ಷಣೆ ಹಾಗೂ ಅತಿಯಾದ ಇಂಟರ್ನೆಟ್ ಬಳಕೆಯಿಂದ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಕವಯತ್ರಿ ಲತಾ ರಾಜಶೇಖರ್ ಕೃತಿ ಬಿಡುಗಡೆಗೊಳಿಸಿ, ‘ಈ ಕೃತಿಯು ಪ್ರವಾಸಿ ಮಾರ್ಗದರ್ಶನದಂತಿದೆ. ಲೇಖಕರು ಕೃತಿಯಲ್ಲಿನ 55 ಲೇಖನಗಳಲ್ಲಿ ಸಾಮಾಜಿಕ, ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿದ್ದು, ಪ್ರತಿಯೊಂದು ಲೇಖನವು ವಿಶೇಷ ಶೀರ್ಷಿಕೆ ಹೊಂದಿದ್ದು, ಓದಿಸಿಕೊಂಡು ಹೋಗುವಂತಹ ಬರವಣಿಗೆಯಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಚಿತ್ರ ನಿರ್ದೇಶಕ ಜಿ.ಆರ್.ಸತ್ಯಲಿಂಗರಾಜು, ರೂಪಾ ಪ್ರಕಾಶನದ ಮಹೇಶ್.ಯು.ಎಸ್ ಉಪಸ್ಥಿತರಿದ್ದರು.