ಮೈಸೂರು: ‘ಉತ್ತಮ ಸೇವೆ ಮೂಲಕ ಗ್ರಾಹಕರನ್ನು ಬಿಎಸ್ಎನ್ಎಲ್ನತ್ತ ಸೆಳೆಯಬೇಕು. ಆದಾಯ ಹೆಚ್ಚಾಗುವಂತೆ ಮಾಡಬೇಕು’ ಎಂದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತೊಣಚಿಕೊಪ್ಪಲಿನಲ್ಲಿರುವ ವಲಯ ದೂರವಾಣಿ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಬಿಎಸ್ಎನ್ಎಲ್ ಮೈಸೂರು ವಲಯ ಕ್ಷೇತ್ರದ ದೂರವಾಣಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಸ್ಯೆಗಳಿದ್ದಲ್ಲಿ ಕೂಡಲೇ ಸ್ಪಂದಿಸಿ ಗ್ರಾಹಕರ ವಿಶ್ವಾಸ ಗಳಿಸಿಕೊಳ್ಳಬೇಕು. ಆ ವ್ಯವಹಾರ ವೃದ್ಧಿಯಾಗುತ್ತದೆ. ಇದಕ್ಕೆ ಪೂರಕವಾಗಿ ಅಗತ್ಯವಿರುವ ಕಡೆಗಳಲ್ಲಿ ಟವರ್ಗಳನ್ನು ಸ್ಥಾಪಿಸಲು ಜಾಗ ಕೊಡಿಸುವ ಜವಾಬ್ದಾರಿ ನನ್ನದು’ ಎಂದು ಭರವಸೆ ನೀಡಿದರು.
‘ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ, ಎಚ್.ಡಿ.ಕೋಟೆ ಹಾಗೂ ಚಾಮರಾಜನಗರದಲ್ಲಿ ಉತ್ತಮ ಸೇವೆ ಒದಗಿಸಲು ಹೆಚ್ಚಿನ ಟವರ್ಗಳನ್ನು ಸ್ಥಾಪಿಸಲು ಗಮನ ನೀಡಬೇಕು. ಮೊಬೈಲ್ ಫೋನ್ ಗ್ರಾಹಕರ ಸೆಳೆಯುವಲ್ಲಿ ಖಾಸಗಿಯವರಿಗಿಂತ ಬಿಎಸ್ಎನ್ಎಲ್ ಹಿಂದೆ ಇದೆ. ಇದಕ್ಕಾಗಿ ನಾನು ಕೆಳಹಂತದ ಅಧಿಕಾರಿಗಳನ್ನು ದೂಷಿಸುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರಗಳಾಗುತ್ತವೆ. ಆದರೆ, ನಿಮ್ಮ ಹಂತದಲ್ಲಿ ಪ್ರಚಾರ ಮಾಡಲು ಪ್ರಯತ್ನಿಸಬೇಕು. ಆಕಾಶವಾಣಿ ಹಾಗೂ ಮಾಧ್ಯಮವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಅನಿಯಮಿತ ಇಂಟರ್ನೆಟ್ ಒದಗಿಸಿ: ‘ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಗ್ರಾಮ ಒನ್ನಲ್ಲಿನ ಸೇವೆಗಳನ್ನು 250ರಿಂದ 500ಕ್ಕೆ ಹೆಚ್ಚಿಸಿದ್ದೇವೆ. ಇದು ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ, ಅವುಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅನಿಯಮಿತ ಇಂಟರ್ನೆಟ್ ಒದಗಿಸಬೇಕು’ ಎಂದು ತಿಳಿಸಿದರು.
‘ಕೊಡಗು ಜಿಲ್ಲೆಯಲ್ಲಿ ಆಪ್ಟಿಕಲ್ ಕೇಬಲ್ ಹಾಕಲು ಅರಣ್ಯ ಇಲಾಖೆಯವರು ತೀವ್ರ ತೊಂದರೆ ಕೊಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್ಎನ್ಎಲ್ ಮೈಸೂರು ವಲಯ ಕ್ಷೇತ್ರದ ಪ್ರಧಾನ ವ್ಯವಸ್ಥಾಪಕ ರಾಜ್ ಕುಮಾರ್ ಮಾತನಾಡಿ, ‘ಕ್ಷೇತ್ರವು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಿದೆ. ಈ ವ್ಯಾಪ್ತಿಯಲ್ಲಿ ‘ಭಾರತ್ ನೆಟ್ ನೆಟ್ವರ್ಕ್’ ಯೋಜನೆಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ 754 ಗ್ರಾಮ ಪಂಚಾಯಿತಿಗಳಿಗೆ ಸೇವೆ ಒದಗಿಸಲಾಗಿದೆ. ಈ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಸಂಪರ್ಕಗಳ ಲಭ್ಯತೆ ಶೇ 88.6ರಷ್ಟಿದೆ’ ಎಂದು ಮಾಹಿತಿ ನೀಡಿದರು.
ಡಿಜಿಎಂ ರವಿಶಂಕರ್ ಎಂ, ಡಿಟಿಎಂ ಪೊನ್ನರಾಜು, ಡಿಜಿಎಂ (ಮೊಬೈಲ್) ಶಂಕರ್ ನಾರಾಯಣ, ಡಿಜಿಎಂ ವಿಜಯಲಕ್ಷ್ಮಿ (ತಾಂತ್ರಿಕ) ಹಾಗೂ ಡಿಜಿಎಂ ಅಶೋಕ್ ನಾಯಕ್ (ಆಡಳಿತ) ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.