ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನಲುಗಿದ ಹೋಟೆಲ್‌ ಉದ್ಯಮ

ಪಾರ್ಸೆಲ್‌ಗೆ ಅವಕಾಶವಿದ್ದರೂ ಬಹುತೇಕ ಹೋಟೆಲ್‌, ರೆಸ್ಟೋರೆಂಟ್‌ಗಳು ಬಂದ್‌
Last Updated 31 ಮೇ 2021, 2:01 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಮೊದಲನೇ ಅಲೆಯ ನಂತರ ಚೇತರಿಕೆ ಹಾದಿ ಹಿಡಿದಿದ್ದ ಜಿಲ್ಲೆಯ ಹೋಟೆಲ್‌ ಉದ್ಯಮ,ವು 2ನೇ ಅಲೆಯ ಹೊಡೆತಕ್ಕೆ ನಲುಗಿ ಹೋಗಿದೆ.

ಹೋಟೆಲ್‌ಗಳಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೂ ಪಾರ್ಸೆಲ್‌ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪಾರ್ಸೆಲ್‌ ನಂಬಿಕೊಂಡು ವ್ಯಾಪಾರ ನಡೆಸಲು ಸಾಧ್ಯವಾಗದ ಕಾರಣ ಅನೇಕ ಹೋಟೆಲ್‌ಗಳು ಬಂದ್‌ ಆಗಿವೆ. ಕೆಲ ಹೋಟೆಲ್‌ಗಳು ಅನಿವಾರ್ಯವಾಗಿ ಪಾರ್ಸೆಲ್‌ ಸೇವೆ ಒದಗಿಸುತ್ತಿವೆ.

ಕಟ್ಟಡ ಬಾಡಿಗೆ, ಕಟ್ಟಡ ತೆರಿಗೆ, ನೀರು–ವಿದ್ಯುತ್‌ ಬಿಲ್‌, ಕಾರ್ಮಿಕರ ಸಂಬಳ, ಪರವಾನಗಿ ನವೀಕರಣ, ಅಬಕಾರಿ ನವೀಕರಣ, ಎಫ್‌ಎಸ್‌ಎಸ್‌ಎಐ ನವೀಕರಣ ಶುಲ್ಕ ಸೇರಿದಂತೆ ವಿವಿಧ ಖರ್ಚು–ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಹೋಟೆಲ್‌ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಮೈಸೂರು ನಗರ, ಜಿಲ್ಲೆಯಲ್ಲಿ ಸುಮಾರು 1,400 ಹೋಟೆಲ್‌, ಲಾಡ್ಜ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ ಹಾಗೂ ಸಿಹಿ ತಿನಿಸುಗಳ ಅಂಗಡಿ, ಬೇಕರಿಗಳಿವೆ. ಒಟ್ಟು 25 ಸಾವಿರ ಹೋಟೆಲ್‌ ಕಾರ್ಮಿಕರಿದ್ದಾರೆ. ಕೋವಿಡ್‌ 2ನೇ ಅಲೆಯ ಲಾಕ್‌ಡೌನ್‌ನಿಂದಾಗಿ ಶೇ 10ರಷ್ಟು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ನೇರ ಹಾಗೂ ಆನ್‌ಲೈನ್‌ ಮೂಲಕ ಪಾರ್ಸೆಲ್‌ ಸೇವೆ ನೀಡುತ್ತಿವೆ. ಬೆಳಿಗ್ಗೆ 10 ಗಂಟೆ ಬಳಿಕ ವಾಹನಗಳ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಪಾರ್ಸೆಲ್‌ ಕೊಂಡೊ
ಯ್ಯುವವರ ಸಂಖ್ಯೆಯೂ ಕಡಿಮೆ. ಹೋಟೆಲ್‌ ತೆರೆದರೂ ಗ್ರಾಹಕರ ಕೊರತೆಯಿಂದ ವ್ಯಾಪಾರವಾಗುತ್ತಿಲ್ಲ. ಹೀಗಾಗಿ, ಅನೇಕರು ಹೋಟೆಲ್‌ ಮುಚ್ಚಿದ್ದಾರೆ’ ಎಂದು ಮೈಸೂರು ನಗರ ಮತ್ತು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಹೋಟೆಲ್‌ ಉದ್ಯಮವು ಅಕ್ಟೋಬರ್‌ನಿಂದ ಮಾರ್ಚ್‌ವರೆಗೂ ಚೇತರಿಕೆ ಕಂಡಿತ್ತು. ಮತ್ತೆ 2ನೇ ಅಲೆ ಆರಂಭವಾಗುತ್ತಿದ್ದಂತೆ ಹೋಟೆಲ್‌ ಉದ್ಯಮ ನೆಲಕಚ್ಚಲಾರಂಭಿಸಿತು. ಮೈಸೂರು ಪ್ರವಾಸೋದ್ಯಮದ ಪ್ರಮುಖ ಕೇಂದ್ರ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ಹೋಟೆಲ್‌ ಉದ್ಯಮ ಗರಿಗೆದರುತ್ತದೆ. ಆದರೆ, ಕೋವಿಡ್‌ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯೂ ಕಡಿಮೆ. ಹೀಗಾಗಿ, ನಷ್ಟದ ಸುಳಿಗೆ ಹೋಟೆಲ್‌ ಮಾಲೀಕರು ಸಿಲುಕಿದ್ದಾರೆ ಎಂದು ಹೇಳಿದರು.

ಹೋಟೆಲ್‌ ಮುಚ್ಚಿದರೆ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಕೆಲವರು ಹೋಟೆಲ್‌ ತೆರೆದು ಪಾರ್ಸೆಲ್‌ ಸೇವೆ ನೀಡುತ್ತಿದ್ದಾರೆ. ಕೆಲ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ. ಹೊರ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ.

ತೆರಿಗೆ ವಿನಾಯಿತಿ ನೀಡಲು ಆಗ್ರಹ

‘ದೊಡ್ಡ ವಾಣಿಜ್ಯೋದ್ಯಮ ವಿಭಾಗಕ್ಕೆ ಹೋಟೆಲ್‌, ಕಲ್ಯಾಣ ಮಂಟಪ, ಚಲನಚಿತ್ರ ಮಂದಿರಗಳನ್ನು ಸೇರಿಸಲಾಗಿದೆ. ಇದರಿಂದ ತೆರಿಗೆ ಪ್ರಮಾಣ ಹೆಚ್ಚಾಗಿದೆ. ಹೋಟೆಲ್‌ ಉದ್ಯಮ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ, ಎಫ್‌ಎಸ್‌ಎಸ್‌ಎಐ ಪರವಾನಗಿ ನವೀಕರಣ, ವ್ಯಾಪಾರ ತೆರಿಗೆಯನ್ನು ಕೈಬಿಡಬೇಕು. ಬಳಿಕ, 2 ವರ್ಷಗಳವರೆಗೆ ಶೇ 50ರಷ್ಟು ತೆರಿಗೆ ಕಟ್ಟಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಈ ಸಂಬಂಧ ಕಾರ್ಮಿಕ ಸಚಿವರು, ಅಬಕಾರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರಿಗೂ ಪತ್ರ ಬರೆದಿದ್ದೇವೆ’ ಎಂದುಸಿ.ನಾರಾಯಣಗೌಡ ತಿಳಿಸಿದರು.

ಸಿಎಲ್‌–7 ಹಾಗೂ ಸಿಎಲ್‌–9 ವಿಭಾಗದಡಿ ಬರುವ ಸ್ಟಾರ್‌ ಹೋಟೆಲ್‌ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಪರವಾನಗಿ ನವೀಕರಣಕ್ಕಾಗಿ ₹8 ಲಕ್ಷದಿಂದ ₹9 ಲಕ್ಷ ಪಾವತಿಸಬೇಕು. ಆದರೆ, ಬಾಗಿಲು ಮುಚ್ಚಿದ್ದರೂ ತೆರಿಗೆ ಪಾವತಿಸಬೇಕಾಗಿದೆ. ವ್ಯಾಪಾರ ನಡೆಸಿರುವುದನ್ನು ಆಧರಿಸಿ ಶುಲ್ಕ ವಿಧಿಸಬೇಕು. ಹೋಟೆಲ್‌ ಕಾರ್ಮಿಕರಿಗೆ ಪ್ಯಾಕೇಜ್‌ ರೂಪದಲ್ಲಿ ಪ್ರೋತ್ಸಾಹಧನ ನೀಡಬೇಕು ಎಂದು ಮನವಿ ಮಾಡಿದರು.

ಹೋಟೆಲ್‌ ಮಾಲೀಕರು ಏನಂತಾರೆ?

‘ಬಾಡಿಗೆ ಕಟ್ಟಲು ಹಣವಿಲ್ಲ’

ಹೆಬ್ಬಾಳದ ಸೂರ್ಯ ಬೇಕರಿ ವೃತ್ತದ ಬಳಿ ಹಾಗೂ ಸಯ್ಯಾಜಿರಾವ್‌ ರಸ್ತೆಯಲ್ಲಿ ಕಾವೇರಿ ಮೆಸ್‌ ನಡೆಸುತ್ತಿದ್ದೇನೆ. ₹40ಕ್ಕೆ ಚಿಕನ್‌ ಬಿರಿಯಾನಿ ನೀಡುವುದರಿಂದ ಹೆಚ್ಚಿನ ಗ್ರಾಹಕರು ಬರುತ್ತಿದ್ದರು. ಎರಡೂ ಕಡೆಗಳಲ್ಲಿ ಪ್ರತಿದಿನ 3 ಸಾವಿರದಿಂದ 3,500 ಮಂದಿ ಊಟ ಮಾಡುತ್ತಿದ್ದರು. ಆದರೆ, ಈಗ 600–700 ಮಂದಿ ಊಟ ಮಾಡುತ್ತಿದ್ದಾರೆ. 20 ಕಾರ್ಮಿಕರ ಪೈಕಿ 10 ಮಂದಿಗೆ ರಜೆ ನೀಡಿದ್ದೇನೆ.ಈಗ ಪಾರ್ಸೆಲ್‌ಗೆ ಮಾತ್ರ ಅವಕಾಶವಿರುವುದರಿಂದ ವ್ಯಾಪಾರದಲ್ಲೂ ಗಣನೀಯವಾಗಿ ಇಳಿಕೆ ಕಂಡಿದೆ. ಈಗ ಬರುತ್ತಿರುವ ಆದಾಯವು ಕಾರ್ಮಿಕರ ವೇತನ ಹಾಗೂ ಹೋಟೆಲ್‌ ನಿರ್ವಹಣೆಗೆ ಸರಿ ಹೋಗುತ್ತಿದೆ. ಬಾಡಿಗೆ ಕಟ್ಟಲು ಹಣವಿಲ್ಲ.

–ಸಿದ್ದರಾಜು ಗೌಡ, ಕಾವೇರಿ ಮೆಸ್‌ ಮಾಲೀಕ

ಬ್ಯಾಂಕ್‌ಗಳಿಂದ ಸಾಲ–ಸೌಲಭ್ಯ ಒದಗಿಸಿ

ಅಳಿವು ಉಳಿವಿನ ಪ್ರಶ್ನೆ ಆಗಿರುವುದರಿಂದ ಹೋಟೆಲ್‌ ತೆರೆದಿದ್ದೇವೆ. ಇಲ್ಲದಿದ್ದರೆ ಜನರು ನಮ್ಮ ಹೋಟೆಲ್‌ ಅನ್ನು ಮರೆಯುತ್ತಾರೆ. ಬೆಳಿಗ್ಗೆ 7ರಿಂದ 11 ಗಂಟೆವರೆಗೂ ತೆರೆಯುತ್ತಿದ್ದೇವೆ. ವ್ಯಾಪಾರ ಇಲ್ಲದ ಕಾರಣ, ಕಾರ್ಮಿಕರಿಗೆ ಸಂಬಳ ನೀಡಲೂ ಸಾಧ್ಯವಾಗುತ್ತಿಲ್ಲ. ಹೋಟೆಲ್‌ ಉದ್ಯಮದವರಿಗೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ–ಸೌಲಭ್ಯ ಒದಗಿಸಬೇಕು.

–ಅಶ್ವಿನ್‌ ಭಟ್‌, ಹೋಟೆಲ್‌ ಶ್ರೀ ದುರ್ಗಾ ಭವನ್‌, ಗೋಕುಲಂ

‘ಹೋಟೆಲ್‌ ಬಂದ್‌ ಮಾಡಿದ್ದೇವೆ’

ಪಾರ್ಸೆಲ್‌ ಸೇವೆಯಿಂದ ನಮಗೆ ನಷ್ಟವೇ
ಹೆಚ್ಚು. ಹೀಗಾಗಿ, ಏಪ್ರಿಲ್‌ 26ರಿಂದ ಹೋಟೆಲ್‌ ಬಂದ್‌ ಮಾಡಿದ್ದೇವೆ. ಮನೆ ಸಾಲ, ಹೋಟೆಲ್‌ ಖರ್ಚು–ವೆಚ್ಚಗಳನ್ನು ಭರಿಸಲು ಕಷ್ಟವಾಗಿದೆ. ನಮ್ಮ ಹೋಟೆಲ್‌ಗೆ ಶೇ 50ರಷ್ಟು ಪ್ರವಾಸಿಗರು, ಶೇ 50ರಷ್ಟು ಸ್ಥಳೀಯ ಗ್ರಾಹಕರು ಬರುತ್ತಾರೆ.

–ಕೆ.ಸಿ.ವಿಶ್ವಾನಂದ ಭಟ್‌, ಮಾಲೀಕರು, ನ್ಯೂ ಮೈಸೂರು ರೀಫ್ರೆಶ್‌ಮೆಂಟ್‌

ಬಂದ್‌ ಮಾಡಿ ಊರಿಗೆ

ವಿದ್ಯಾರ್ಥಿಗಳು, ಗಾರೆ ಕೆಲಸ ಮಾಡುವವರು, ಸ್ಥಳೀಯರು ನಮ್ಮ ಗ್ರಾಹಕರು. ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಾವು ಸೇವೆ ನೀಡುತ್ತಿದ್ದೆವು. ಆದರೆ, ಪಾರ್ಸೆಲ್‌ಗೆ ಮಾತ್ರ ಅವಕಾಶವಿರುವುದರಿಂದ ವ್ಯಾಪಾರ ಆಗುವುದಿಲ್ಲ. ಹೀಗಾಗಿ, ಬಂದ್‌ ಮಾಡಿ ಊರಿಗೆ ಹೋಗಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಮಾರಾಟಕ್ಕೆ ಅವಕಾಶ ಸಿಕ್ಕಾಗ ಬರುತ್ತೇವೆ.

–ಪುಟ್ಟರಾಜು, ಸುಬ್ಬಣ್ಣ ಇಡ್ಲಿ ಕಾರ್ನರ್‌, ಗಂಗೋತ್ರಿ ಬಡಾವಣೆ

ಕೆಲಸ ಕಳೆದುಕೊಂಡಿರುವ ಕಾರ್ಮಿಕರು

ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಎಷ್ಟೇ ವ್ಯಾಪಾರವಾದರೂ ಪರವಾಗಿಲ್ಲ, ಹೋಟೆಲ್‌ ತೆರೆಯೋಣ ಎಂದು ನಮ್ಮ ಮಾಲೀಕರು ಹೇಳಿದರು. ನಾನು ಮನೆಯಲ್ಲೇ ಇರುವುದಕ್ಕಿಂತ ಹೋಟೆಲ್‌ಗೆ ಬಂದು ಬಿರಿಯಾನಿ, ಇತ್ಯಾದಿ ತಿನಿಸುಗಳನ್ನು ತಯಾರಿಸುತ್ತಿದ್ದೇನೆ.

–ರಾಜಕುಮಾರ್‌, ಅಡುಗೆ ತಯಾರಕ, ಕಾವೇರಿ ಮೆಸ್‌, ಸಯ್ಯಾಜಿರಾವ್‌ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT