ಮೈಸೂರು: ದೇಶದ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತೆಗೆದುಕೊಂಡಿದ್ದ ದಿಟ್ಟ ನಿರ್ಧಾರಗಳನ್ನು ಇದುವರೆಗೆ ಯಾವುದೇ ಪ್ರಧಾನಿಗೆ ತೆಗೆದುಕೊಳ್ಳಲು ಆಗಿಲ್ಲ ಎಂದು ಕಾಂಗ್ರೆಸ್ ಮುಖಂಡ ವಾಸು ಹೇಳಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿ ಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ಮತ್ತು ಇಂದಿರಾ ಗಾಂಧಿ ಬಲಿದಾನದ ದಿನದ ಅಂಗವಾಗಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಕಿಸಾನ್ ಅಧಿಕಾರ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿರಾ ಅವರು ಕುಂಬಾರಿಕೆ ಒಳಗೊಂಡಂತೆ ಸಣ್ಣ ಪುಟ್ಟ ಕೆಲಸ ಮಾಡುವವರಿಗೆ ಸಹಾಯನ ಧನ ನೀಡಿದ್ದರು. ಸಾಲ ತೀರಿಸಲು ಆಗದವರ ಸಾಲ ಮನ್ನಾ ಮಾಡಿ ದ್ದರು. ಅವರ ನಿರ್ಧಾರಗಳು ಇಂದಿಗೂ ಸ್ಫೂರ್ತಿಯಾಗಿವೆ ಎಂದರು.
ಸುಳ್ಳು ಹೇಳಿದ್ದೇ ಬಿಜೆಪಿ ಸಾಧನೆ: ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮ ಶೇಖರ್ ಮಾತನಾಡಿ, ಕಾಂಗ್ರೆಸ್ ಅಧಿ ಕಾರದಲ್ಲಿದ್ದ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಬಿಜೆಪಿಯು ಕಳೆದ ಆರು ವರ್ಷಗಳಲ್ಲಿ ಮಾತ್ರ ದೇಶ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಬಡವರು, ಸಾಮಾನ್ಯ ಜನರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ ಎಂದು ಟೀಕಿಸಿದರು.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನೇ ಕೊಡಬೇಕಾಗಿ ಬಂದಿತ್ತು. ಆದರೆ ಈಗ ಆಡಳಿತದಲ್ಲಿರುವವರು ಯಾವುದೇ ತ್ಯಾಗ, ಬಲಿದಾನ ಮಾಡಿಲ್ಲ. ಆದರೆ ಎಲ್ಲವನ್ನು ನಾವೇ ಮಾಡಿದ್ದಾಗಿ ಸುಳ್ಳು ಹೇಳುತ್ತಿದ್ದಾರೆ. ದೇಶದ ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು.
ಇಂದಿರಾ ಗಾಂಧಿ ಮತ್ತು ಒಕ್ಕೂಟ ವ್ಯವಸ್ಥೆ ತಂದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ನಮಗೆ ಮಾದರಿ ಯಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಹರೀಶ್ ಗೌಡ, ವೆಂಕಟೇಶ್, ರಾಜು, ಈಶ್ವರ್, ಮನೋಜ್, ಪ್ರಶಾಂತ್ ಗೌಡ, ಶಿವಣ್ಣ ಹಾಜರಿದ್ದರು.