ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ನಮ್ಮ ದೇಶದಲ್ಲಿ ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅದು ನಮ್ಮ ಆದ್ಯ ಕರ್ತವ್ಯವೂ ಹೌದು.
ಈ ಸಮಯದಲ್ಲಿ ಮತದಾರ ಅತ್ಯಂತ ಜಾಗರೂಕವಾಗಿ ಹಕ್ಕು ಚಲಾಯಿಸಬೇಕು. ಪ್ರತಿ ಮತವೂ ನಮ್ಮ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಯಾವುದೇ ಆಸೆ–ಆಮಿಷಕ್ಕೆ ಒಳಗಾಗದೇ ಸೂಕ್ತ ಎನಿಸುವವರಿಗೆ ಮತದಾನ ಮಾಡಬೇಕು. ಈ ಮೂಲಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇತರರಿಗೂ ಪ್ರೇರಣೆ ನೀಡಬೇಕು.
ಇಂದಿನ ವ್ಯವಸ್ಥೆ ನೋಡಿ ಎಷ್ಟೋ ಮತದಾರರು ಭ್ರಮನಿರಸನಕ್ಕೆ ಒಳಗಾಗಿ ಮತದಾನದಿಂದ ದೂರ ಉಳಿಯಬಹುದು. ಈ ಮನಸ್ಥಿತಿ ಉಳ್ಳವರಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿ ಮತಗಟ್ಟೆಗೆ ಕರೆತರುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿದಾಗಲೇ ಪ್ರಜಾಪ್ರಭುತ್ವಕ್ಕೆ ಸೊಬಗು. ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು.
–ಸಾಲುಂಡಿ ದೊರೆಸ್ವಾಮಿ, ಉಪಾಧ್ಯಕ್ಷ, ಸರ್ಕಾರಿ ನೌಕರರ ಸಂಘ, ಮೈಸೂರು ಜಿಲ್ಲಾ ಘಟಕ