ಮೈಸೂರು: ಪಂಚಮಸಾಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ ‘2ಎ’ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಒಟ್ಟು ಲಿಂಗಾಯತರನ್ನು ಓಬಿಸಿಗೆ ಸೇರಿಸಿ ಸವಲತ್ತುಗಳನ್ನು ನೀಡಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.
ಉತ್ತರ ಭಾಗದ ಪಂಚಮಸಾಲಿಗಳು, ಮೈಸೂರು ಭಾಗದಲ್ಲಿರುವ ಗೌಡ ಲಿಂಗಾಯತರು, ಮಲೆನಾಡಿನಲ್ಲಿರುವ ಮಲೆಗೌಡರು, ಕಲ್ಯಾಣ ಕರ್ನಾಟಕದಲ್ಲಿರುವಂತಹ ದೀಕ್ಷಾ ಲಿಂಗಾಯತರು, ಕರಾವಳಿ ಕರ್ನಾಟಕದಲ್ಲಿರುವ ಗೌಳಿ ಲಿಂಗಾಯತರು, ಇವರೆಲ್ಲರೂ ಕೃಷಿಕರು ಹಾಗೂ ಲಿಂಗಾಧಾರಿಗಳೇ ಆಗಿದ್ದಾರೆ. ಇವರಿಗೆಲ್ಲ ಮೀಸಲಾತಿಯ ಪ್ರಯೋಜನ ಸಿಗಬೇಕು. ಇದಕ್ಕಾಗಿ ಮೊದಲು ಕುಲಶಾಸ್ತ್ರದ ಅಧ್ಯಯನ ನಡೆಯಬೇಕು ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಒಕ್ಕಲಿಗ ಲಿಂಗಾಯತರನ್ನೆಲ್ಲ ಒಗ್ಗೂಡಿಸುವಂತಹ ವ್ಯವಸ್ಥಿತವಾದ ಕೆಲಸಕ್ಕೆ ಕೈ ಹಾಕಿದ್ದೇನೆ. ಇದಕ್ಕಾಗಿ ಗ್ರಾಮದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ. 2ರಿಂದ 7ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 100 ಗ್ರಾಮಗಳಿಗೆ ಭೇಟಿ ನೀಡುತ್ತೇನೆ’ ಎಂದರು.
ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಜ.14 ಮತ್ತು 15ರಂದು ಹರಜಾತ್ರೆ ಆಯೋಜಿಸಲಾಗಿದೆ. ಜಾತ್ರೆಯಲ್ಲಿ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ಕೇಂದ್ರ ಸಮಾಜ ಕಲ್ಯಾಣ ಸಚಿವ ತಾವರ್ಚಂದ್ ಗೆಹ್ಲೂಟ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಧಾರ್ಮಿಕ, ಆಧ್ಯಾತ್ಮಿಕ, ಆರೋಗ್ಯ, ಕೃಷಿ ಹಾಗೂ ಯುವ ಸಬಲೀಕರಣದ ಪರಿಕಲ್ಪನೆಯಲ್ಲಿ ಜಾತ್ರೆಯಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. ಮಠದ ಆವರಣದಲ್ಲಿರುವ ಹರದ್ವಾರ ಉದ್ಘಾಟನೆ, ಯೋಗ ವಿಜ್ಞಾನ ಶಿಬಿರ, ಭೂ-ತಪಸ್ವಿ ಸಮಾವೇಶ, ಯುವರತ್ನ ಸಮಾವೇಶ ಮತ್ತು ಸಾಮೂಹಿಕ ಯೋಗ ತರಬೇತಿ ನಡೆಯಲಿದೆ ಎಂದು ತಿಳಿಸಿದರು.