ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ಸಿ.ಎನ್.ಪ್ರಭು, ‘ನಮ್ಮ ತುಂಗಾಭದ್ರಾ, ಕೆಆರ್ಎಸ್ ಹಾಗೂ ಹಾರಂಗಿ ಜಲಾಶಯದ ಬಳಿ ಅಳವಡಿಸಲಾದ ರಿಕ್ಟರ್ ಮಾಪನ ಕೇಂದ್ರಗಳ ವರದಿಗಳ ಆಧಾರದ ಮೇಲೆ ಭೂಕಂಪದ ಕೇಂದ್ರಬಿಂದು ಅರಕಲಗೂಡು–ಕೆ.ಆರ್.ನಗರ ಗಡಿಯಲ್ಲಿರುವುದು ಖಚಿತಪಟ್ಟಿದೆ. 2.6 ತೀವ್ರತೆಯ ಲಘು ಕಂಪನ ಇದಾಗಿದ್ದು, ಇದರಿಂದ ಯಾವುದೇ ತೊಂದರೆ ಉಂಟಾಗದು. ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ಕಂಪನ ಏಕೆ ಉಂಟಾಯಿತು ಎಂಬ ವಿಶ್ಲೇಷಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.