ಮೈಸೂರು: ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ತನ್ನ ಮೇಲೆ ನಂಬಿಕೆ ಇರಿಸಿದ್ದ ಜಯಮ್ಮ ಎಂಬುವವರನ್ನು ಕೊಲೆ ಮಾಡಿದ ಇಲ್ಲಿನ ಕಾವೇರಿನ ನಗರದ ನಿವಾಸಿ ಪಿ.ಶ್ರೀನಿವಾಸ್ (28) ಎಂಬ ಆರೋಪಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರ:
ಜಯಮ್ಮ ಅವರ ಬಳಿ ಶ್ರೀನಿವಾಸ ಸಾಲ ಪಡೆದುಕೊಂಡಿದ್ದ. ಇತರರಿಗೆ ನೀಡಿದ್ದ ಸಾಲ ವಸೂಲಾತಿಗೆ ಜಯಮ್ಮ ಶ್ರೀನಿವಾಸನನ್ನೇ ಅತಿಯಾಗಿ ನಂಬಿ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಜಯಮ್ಮ ತಾನು ನೀಡಿದ್ದ ಸಾಲವನ್ನು ಪಾವತಿಸುವಂತೆ ಕೇಳಿದ್ದರು. ಸಾಲ ಪಾವತಿಸಲು ಹಣ ಇಲ್ಲದೆ ಪರಿತಪಿಸುತ್ತಿದ್ದ ಶ್ರೀನಿವಾಸ ಕೊಲೆ ಮಾಡಲು ಸಂಚು ರೂಪಿಸಿದ.
2013ರ ಫೆಬ್ರುವರಿ 10ರಂದು ರಾತ್ರಿ ಜಯಮ್ಮನನ್ನು ಆಕೆಯಿಂದ ಸಾಲ ಪಡೆದಿದ್ದ ಮಜ್ಜು ಎಂಬಾತನ ಮನೆಗೆ ಸಾಲ ವಸೂಲಿಗೆಂದು ತನ್ನ ಆಟೊದಲ್ಲಿ ಕರೆದುಕೊಂಡು ಹೋಗುತ್ತಾ, ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯ ಮೋರಿ ಬಳಿ ಎಕ್ಸಿಲೇಟರ್ ವೈರ್ ಕಟ್ಟಾಗಿದೆ ಎಂದು ಆಟೊ ನಿಲ್ಲಿಸಿದ್ದಾನೆ. ಬಳಿಕ ರಿಪೇರಿ ಮಾಡಬೇಕು ಎಂದು ಹೇಳಿ ಜಯಮ್ಮನನ್ನು ಆಟೊದಿಂದ ಕೆಳಗಿಳಿಸಿ ಅವರಿಗೆ ಕೇಬಲ್ ವೈರ್ ಹಿಡಿದುಕೊಳ್ಳಲು ಹೇಳಿ, ಜಯಮ್ಮ ಬಗ್ಗಿ ವೈರು ಹಿಡಿದಿರುವಾಗ ಶ್ರೀನಿವಾಸ್ ಹಿಂದಿನಿಂದ ಮರದ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ನಂತರ, ಅವರ ಕೈನಲ್ಲಿದ್ದ 2 ಚಿನ್ನದ ಬಳೆ, ಕತ್ತಿನಲ್ಲಿದ್ದ ಚೈನ್ ಅನ್ನು ದೋಚಿ, ಮೃತದೇಹವನ್ನು ಮೋರಿಗೆ ಹಾಕಿದ್ದು, ಒಡವೆಯನ್ನು ಬೆಲವತ್ತ ಗ್ರಾಮದ ಪ್ರವೀಣ ಎಂಬವರ ಬಳಿ ಗಿರವಿ ಇಟ್ಟಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೇಟಗಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಜಿತ್ಕುಮಾರ್ ಡಿ.ಹಮಿಗಿ ವಾದ ಮಂಡಿಸಿದ್ದರು.