ಮೈಸೂರು: ಎರಡು ಸಿಂಹಗಳು ಹಾಗೂ ಒಂದು ಚಿಂಪಾಂಜಿ, ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿವೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರವು, ಗುಜರಾತ್ನ ಸಕರ್ಬಾಗ್ ಮೃಗಾಲಯದಿಂದ ನಾಲ್ಕು ಸಿಂಹಗಳನ್ನು (ಎರಡು ಗಂಡು, ಎರಡು ಹೆಣ್ಣು) ತಂದಿದೆ. ಅವುಗಳ ಪೈಕಿ ಎರಡು ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಾಗಿಸಿದೆ.
ಸಿಂಹಗಳ ಬದಲಿಗೆ ಸಕರ್ಬಾಗ್ ಮೃಗಾಲಯಕ್ಕೆ ಎರಡು ನೀರಾನೆ ಹಾಗೂ ಒಂದು ಕಾಡೆಮ್ಮೆಯನ್ನು ಹಸ್ತಾಂತರಿಸಲಾಗಿದೆ.
14 ವರ್ಷ ವಯಸ್ಸಿನ ಹೆಣ್ಣು ಚಿಂಪಾಂಜಿಯನ್ನು ಸಿಂಗಪುರದಿಂದ ವಿಮಾನದಲ್ಲಿ ತರಲಾಗಿದೆ. ಇದಕ್ಕೆ ಬದಲಾಗಿ ಮೈಸೂರು ಮೃಗಾಲಯದಿಂದ ಹೆಣ್ಣು ಕರಡಿಯನ್ನು ಸಿಂಗಪುರ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
‘ಪ್ರಾಣಿಗಳ ವಿನಿಮಯ ಯೋಜನೆಯಡಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಈ ಪ್ರಾಣಿಗಳ ವೀಕ್ಷಣೆಗೆ ಸದ್ಯದಲ್ಲೇ ಪ್ರವಾಸಿಗರಿಗೆ ಅವಕಾಶ ನೀಡಲಾಗುವುದು. ಈ ಪ್ರಾಣಿಗಳ ಸೇರ್ಪಡೆಯಿಂದಾಗಿ ಮೃಗಾಲಯವು ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.