ಬಿಳಿಕೆರೆ: ಹುಣಸೂರು ಉಪವಿಭಾಗ ವ್ಯಾಪ್ತಿಯ ನಾಲ್ಕು ಹೋಬಳಿಗಳಲ್ಲಿ ನಾಡ ಕಚೇರಿಗಳಿದ್ದು, ಒಂದಕ್ಕೂ ಸ್ವಂತ ಕಟ್ಟಡವಿಲ್ಲ. ಮೂಲಸೌಕರ್ಯದ ಕೊರತೆ ನಡುವೆ ಈ ಕಚೇರಿಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಳಿಕೆರೆ ಗ್ರಾಮದಲ್ಲಿರುವ ನಾಡ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿ ಹಾಗೂ ಇಲ್ಲಿಗೆ ಬರುವ ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಈ ಕಟ್ಟಡವು ಸುಮಾರು 80 ವರ್ಷಗಳ ಹಳೆಯದು. ಈ ಹಿಂದೆ ಇದು ಶಾಲೆಯಾಗಿತ್ತು. ಗೋಡೆಯ ಮೇಲ್ಪದರ ಅಲ್ಲಲ್ಲಿ ಬಿದ್ದು ಹೋಗಿದ್ದು, ಇಟ್ಟಿಗೆಗಳು ಕಾಣುತ್ತಿವೆ. ಮಳೆಗಾಲದಲ್ಲಿ ನೀರು ಸೋರುತ್ತದೆ. ಆದರೆ, ಸುಣ್ಣ–ಬಣ್ಣ ಬಳಿದಿರುವುದರಿಂದ ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ವತಿಯಿಂದ ಕಂಪ್ಯೂಟರ್ ಆಪರೇಟರ್ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ. ಆದರೆ, ಸಿಬ್ಬಂದಿಗೆ ಬೇಕಾದ ಮೂಲಸೌಲಭ್ಯಗಳು ಇಲ್ಲ. ದಾಖಲೆಗಳನ್ನು ಇಡಲು ಸ್ಟ್ಯಾಂಡ್ ಇಲ್ಲ. ಇದರಿಂದ ನೌಕರರಿಗೆ ಸಮಸ್ಯೆ ಆಗುತ್ತಿದೆ.
ತಹಶೀಲ್ದಾರ್ ಮೋಹನ್ ಮಾತನಾಡಿ, ‘ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಜಾಗಗಳನ್ನು ಗುರುತಿಸಲಾಗಿದೆ. ಅನುದಾನ ಸಿಕ್ಕ ಕೂಡಲೇ ಕಟ್ಟಡಗಳ ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.