ಮೈಸೂರು: ನಗರದ ಬೀಡಾ ಅಂಗಡಿಯಲ್ಲಿ ಹಣ ನೀಡುವ ವಿಚಾರದಲ್ಲಿ ಮಾಜಿ ಶಾಸಕ ಸಾ.ರಾ.ಮಹೇಶ್ ಮಗ ಸಾ.ರಾ.ಜಯಂತ್ ಹಾಗೂ ಪತ್ರಕರ್ತರೊಬ್ಬರ ಮಗನ ನಡುವೆ ಭಾನುವಾರ ರಾತ್ರಿ ಜಗಳ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕುವೆಂಪುನಗರದಲ್ಲಿರುವ ಹೋಟೆಲ್ವೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಊಟದ ಬಳಿಕ ಬೀಡಾ ತಿಂದು ಹಣ ನೀಡಲು ಸಾ.ರಾ.ಮಹೇಶ್ ಮಗ ಮುಂದಾದಾಗ ಪತ್ರಕರ್ತರ ಪುತ್ರ ಸ್ಕ್ಯಾನರ್ಗೆ ಅಡ್ಡ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ; ಹೊಡೆದಾಡಿಕೊಂಡಿದ್ದಾರೆ.
ಕುವೆಂಪುನಗರ ಪೊಲೀಸರು ಇಬ್ಬರನ್ನೂ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.