ಕೆ.ಆರ್.ನಗರ: ಶಿವಾನುಭವ ಮಹಿಳಾ ಸಮಾಜದ ಕಟ್ಟಡಕ್ಕೆ ₹ 5 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಭರವಸೆ ನೀಡಿದರು.
ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಶಿವಾನುಭವ ಮಹಿಳಾ ಸಮಾಜದಿಂದ ಈಚೆಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ ಎಂಬ ಉದ್ದೇಶದಿಂದ ತಾಲ್ಲೂಕಿನ ಸುಮಾರು 3,200 ಸಂಘಗಳಿಗೆ ಪ್ರಸಕ್ತ ಸಾಲಿನಲ್ಲಿ ವೈಯಕ್ತಿಕವಾಗಿ ತಲಾ ₹ 20 ಸಾವಿರ ನೀಡಲಾಗಿದೆ ಎಂದರು.
ಸಂಘದ ಅಧ್ಯಕ್ಷೆ ರೇಖಾ ರವೀಂದ್ರ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ ಸೇರಿದಂತೆ ಅನೇಕ ಪಿಡುಗು ಜಾರಿಯ ಲ್ಲಿದ್ದವು. ಇತ್ತೀಚಿನ ದಿನಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಪುರುಷರಂತೆ ಮಹಿಳೆಯೂ ಎಲ್ಲ ರಂಗದಲ್ಲೂ ಕೆಲಸ ಮಾಡುತ್ತಿದ್ದಾಳೆ ಎಂದರು.
ಮಹಿಳೆಗಾಗಿ ಕೆಲವೊಂದು ವಿಶೇಷ ಕಾನೂನು ಜಾರಿಯಲ್ಲಿವೆ. ಆದರೆ, ಕೆಲವು ಮಹಿಳೆಯರು ಪುರುಷರ ವಿರುದ್ಧ ಅತ್ಯಾಚಾರದ ಹೆಸರಿನಲ್ಲಿ ಪ್ರಕರಣ ದಾಖಲಿಸಿ ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಲಾಳನಹಳ್ಳಿ ಮಠದ ಜಯದೇವಿ ತಾಯಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಗಪಟು ಪದ್ಮಾ, ಮಾಜಿ ಸೈನಿಕ ಕಿರಣ್, ಡಾ.ಉಲ್ಲಾಸ್, ಡಾ.ಸುಹಾಸ್, ಮಹಿಳಾ ಸಂಘದ ಶರಾವತಿ ಅವರಿಗೆ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಕವಿತಾ ವಿಜಕುಮಾರ್, ಸದಸ್ಯೆ ಹರ್ಷಲತಾ ರಾಜಾಶ್ರೀಕಾಂತ್, ಜೆಡಿಎಸ್ ತಾಲ್ಲೂಕು ಯುವ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸತೀಶ್, ಸಂಘದ ಸದಸ್ಯರಾದ ಚಲುವಾಂಬ, ರತ್ನಾ, ಶೋಭಾ, ಕುಸುಮಾ, ಜಮುನಾ, ಉಮಾ, ಬೇಬಿ, ನಾಗರತ್ನಾ, ರತ್ನಮ್ಮ, ಶಾಂತಾ ಸೇರಿದಂತೆ ಇತರರು ಹಾಜರಿದ್ದರು.